ಕೊಳ್ಳೇಗಾಲ: ‘ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರಿಯಾಗಿದ್ದು, ಯುವಪೀಳಿಗೆ ಕ್ರೀಡೆಗೆ ಹೆಚ್ಚು ಒತ್ತುನೀಡಬೇಕು’ ಎಂದು ಪಟ್ಟಣ ಠಾಣೆ ಎಸ್ಐ ಸಂತೋಷ ತಿಳಿಸಿದರು.
ಇಲ್ಲಿನ ಬಸವಲಿಂಗಪ್ಪ ಕಾಲೇಜು ಆವರಣದಲ್ಲಿ ಭಾನುವಾರ ಎಚ್.ಕೆ. ಸ್ಪೋರ್ಟ್ಸ್ ಅಕಾಡೆಮಿ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಹಾಗೂ ರೋಟರಿ ಮಿಡ್ಟೌನ್ ಸಂಯುಕ್ತಾಶ್ರಯದಲ್ಲಿ ಏ. 11ರಿಂದ ಮೇ 25ರವರೆಗೆ ಏರ್ಪಡಿಸಿರುವ ‘ಕ್ರಿಕೆಟ್ ಸಮ್ಮರ್ ಕ್ಯಾಂಪ್’ ಉದ್ಘಾಟನಾ ಕಾರ್ಯಕ್ರಮದಲ್ಲಿ ಈಚೆಗೆ ಅವರು ಮಾತನಾಡಿದರು.
ಕ್ರೀಡಾಪಟುಗಳು ಸೋಲು– ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣ ಮೈಗೂಡಿಸಿಕೊಳ್ಳಬೇಕು. ಬೇಸಿಗೆ ರಜೆಯಲ್ಲಿ ವಿದ್ಯಾರ್ಥಿಗಳು ವ್ಯರ್ಥವಾಗಿ ಕಾಲಹರಣ ಮಾಡದೆ ಉತ್ತಮ ತರಬೇತಿ ಹೊಂದಲು ಇಂತಹ ಶಿಬಿರಗಳು ಸಹಾಯಕಾರಿ ಎಂದರು.
ರೋಟರಿ ಮಿಡ್ಟೌನ್ ಅಧ್ಯಕ್ಷ ನಟರಾಜು ಕ್ಯಾಂಪ್ ಉದ್ಘಾಟನೆ ನೆರವೇರಿಸಿದರು. ಪ್ರೇಮಲತಾ ಕೃಷ್ಣಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯ ರಮೇಶ್, ಜೆ. ಹರ್ಷ, ನಗರಸಭಾ ಮಾಜಿ ಸದಸ್ಯ ಚಂದ್ರಶೇಖರ್, ಪ್ರವೀಣ್ಕುಮಾರ್, ಉಮಾಶಂಕರ್, ನಟರಾಜು, ಮುಖ್ಯ ಶಿಕ್ಷಕ ಶಾಂತರಾಜು,ಲೋಕೇಶ್ ಇದ್ದರು.