ಬಂಗಾರಪೇಟೆ: ನಗರೋತ್ಥಾನ ಯೋಜನೆ ಹೆಸರಲ್ಲಿ ಗುಣಮಟ್ಟದ ರಸ್ತೆಗಳನ್ನು ಅಗೆದು ಮತ್ತೊಂದು ಬಾರಿ ಡಾಂಬರು ಹಾಕುತ್ತಿರುವುದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಎನ್ಟಿಜಿಎಂ ಶಾಲೆ ದಕ್ಷಿಣಕ್ಕಿರುವ ರಸ್ತೆಯಲ್ಲಿ ಒಂದೆರಡು ಕಡೆ ನೀರಿನ ಸಂಪರ್ಕಕ್ಕಾಗಿ ರಸ್ತೆ ಅಗೆಯಲಾಗಿದೆ. ಆ ಜಾಗದಲ್ಲಿ ಡಾಂಬರು ಹಾಕಿ ತೇಪೆ ಹಚ್ಚಬಹುದಾಗಿತ್ತು. ಆದರೆ ಅಧಿಕಾರಿಗಳು ಪೂರ್ಣ ರಸ್ತೆಯನ್ನೇ ಅಗೆದು ಹೊಸದಾಗಿ ಡಾಂಬರು ಹಾಕಲು ಮುಂದಾಗಿದ್ದಾರೆ. ಇದು ಅಗತ್ಯವಿರಲಿಲ್ಲ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಅಮರಾವತಿ ನಗರ, ಸಿದ್ಧಾರ್ಥ ನಗರ, ಕುಂಬಾರಪಾಳ್ಯ, ಇಂದಿರಾ ಆಶ್ರಯ ಕಾಲೊನಿ ಸೇರಿದಂತೆ ಹಲವು ರಸ್ತೆಗಳು ಹದಗೆಟ್ಟಿವೆ. ಕೆಲ ರಸ್ತೆಗಳು ಡಾಂಬರನ್ನೇ ಕಂಡಿಲ್ಲ. ಹೀಗಿರುವಾಗ ಉತ್ತಮವಾದ ರಸ್ತೆಗಳನ್ನು ಮತ್ತಷ್ಟು ಸಿಂಗಾರಗೊಳಿಸಿ ಸರ್ಕಾರದ ಹಣವನ್ನು ಪೋಲು ಮಾಡಲಾಗುತ್ತಿದೆ ಎಂದು ಆಟೊ ಚಾಲಕರೊಬ್ಬರು ಆರೋಪಿಸಿದ್ದಾರೆ.
ವಿಜಯನಗರದ ಮುಖ್ಯ ರಸ್ತೆ ಅಗೆದು ಎರಡು ವಾರಗಳಾಗಿವೆ. ಜನರು ಓಡಾಡಲು ಆಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ದ್ವಿಚಕ್ರ ವಾಹನ ಸಂಚರಿಸಲು ಕಷ್ಟಸಾಧ್ಯ. ಎರಡು ವರ್ಷದ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರೋತ್ಥಾನ ಯೋಜನೆಯಡಿ ಪಟ್ಟಣಕ್ಕೆ ₨5 ಕೋಟಿ ಅನುದಾನ ಬಿಡುಗಡೆಯಾಗಿತ್ತು. ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಅಡ್ಡಿಬಂದ ಕಾರಣ ಕಾಮಗಾರಿ ಆರಂಭವಾಗಿರಲಿಲ್ಲ.
ಈಗ ಸರ್ಕಾರ ಬದಲಾಗಿರುವುದರಿಂದ ವಿಳಂಬವಾಗಿ ಕಾಮಗಾರಿ ಆರಂಭಿಸಲಾಗಿದೆ. ಹದಗೆಟ್ಟ ರಸ್ತೆಗಳಿಗೆ ಮಾತ್ರ ಸಂಪೂರ್ಣ ಡಾಂಬರು ಹಾಕಲು ಯೋಜನೆ ರೂಪಿಸಲಾಗಿತ್ತು. ಆದರೆ ಅಧಿಕಾರಿಗಳು ಯೋಜನೆಯ ಮೂಲ ಉದ್ದೇಶವನ್ನು ಮರೆತಿದ್ದಾರೆ ಎಂದು ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ದೂರಿದರು.
ಪಟ್ಟಣದಲ್ಲಿ ಎಲ್ಲಾ ರಸ್ತೆಗಳನ್ನು ಅಗೆದ ನಂತರವೇ ಡಾಂಬರು ಹಾಕುವ ಕಾರ್ಯ ಆರಂಭಿಸುವುದಾಗಿ ಭೂಸೇನೆ ನಿಗಮದ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಪುರಸಭೆ ಅಧ್ಯಕ್ಷೆ ಗಂಗಮ್ಮ ರಂಗರಾಮಯ್ಯ ಹೇಳಿದ್ದಾರೆ.
ಕೃಷಿ ಮೇಳ: ಕೃಷಿ ಪ್ರಶಸ್ತಿ
ಕೋಲಾರ: ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ನವೆಂಬರ್ನಲ್ಲಿ ಕೃಷಿ ಮೇಳ ಆಯೋಜಿಸಲಿದ್ದು,ತಾಲ್ಲೂಕು ಮಟ್ಟದ ಯುವ ರೈತ, ರೈತ ಮಹಿಳೆ ಪ್ರಶಸ್ತಿ, ಜಿಲ್ಲಾ ಮಟ್ಟದ ಪ್ರಗತಿಪರ ರೈತ, ರೈತ ಮಹಿಳೆ ಪ್ರಶಸ್ತಿ, ಕಾರ್ಪ್ ಪ್ರಶಸ್ತಿ, ಸಿ.ಬೈರೇಗೌಡ ರಾಜ್ಯ ಮಟ್ಟದ ರೈತ ಪ್ರಶಸ್ತಿ, ಡಾ.ಎಂ.ಎಚ್.ಮರಿಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ ನೀಡಲಿದೆ. ಹೆಚ್ಚಿನ ವಿವರಗಳಿಗೆ ದೂ.080–-23418883 ಸಂಪರ್ಕಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.