ನವದೆಹಲಿ (ಪಿಟಿಐ): ಉತ್ತರಾಖಂಡದ ಅರಣ್ಯ ಪ್ರದೇಶಗಳಲ್ಲಿ ಹೊತ್ತಿಕೊಂಡಿರುವ ಕಾಳ್ಗಿಚ್ಚು ಶೇಕಡ 70ರಷ್ಟು ನಿಯಂತ್ರಣಕ್ಕೆ ಬಂದಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ತಿಳಿಸಿದೆ.
‘110ರಿಂದ115 ಕಡೆಗಳಲ್ಲಿ ಬೆಂಕಿ ನಿಯಂತ್ರಣಕ್ಕೆ ಬಂದಿರುವುದು ಹೊಸದಾಗಿ ಲಭ್ಯವಾಗಿರುವ ಸ್ಯಾಟಲೈಟ್ ಚಿತ್ರಗಳ ಮೂಲಕ ಗೊತ್ತಾಗಿದೆ. ಉಳಿದ ಪ್ರದೇಶಗಳಲ್ಲಿ ಬೆಂಕಿ ನಿಯಂತ್ರಣಕ್ಕೆ ಕಾರ್ಯಾಚರಣೆ ನಡೆಯುತ್ತಿದೆ’ ಎಂದು ಎನ್ಡಿಆರ್ಎಫ್ ಮಹಾ ನಿರ್ದೇಶಕ ಒ.ಪಿ.ಸಿಂಗ್ ತಿಳಿಸಿದ್ದಾರೆ.
‘ಕಾಳ್ಗಿಚ್ಚು ನಿಯಂತ್ರಣದ ಜತೆಗೆ ವನ್ಯಜೀವಿಗಳ ರಕ್ಷಣೆಗೂ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
ಹಲವು ಕಡೆ ಕಾಳ್ಗಿಚ್ಚು ನಿಯಂತ್ರಣಕ್ಕೆ ಬಂದಿದ್ದರೂ ದಟ್ಟ ಹೊಗೆ ಕಾಡಿನಿಂದ ಏಳುತ್ತಿದೆ. ಭಾರತೀಯ ವಾಯುಪಡೆಯ (ಐಎಎಫ್) ಮಿಗ್ –17 ಹೆಲಿಕಾಪ್ಟರ್ ಮೂಲಕ ಕಾಳ್ಗಿಚ್ಚು ನಿಯಂತ್ರಣಕ್ಕೆ ನೀರೆಚುವ ಕಾರ್ಯ ಮುಂದುವರಿದಿದೆ.