ನವದೆಹಲಿ (ಪಿಟಿಐ): ‘ದೇಶದ ಷೇರುಪೇಟೆ ಮತ್ತು ಕರೆನ್ಸಿ ಮಾರುಕಟ್ಟೆ ಯಲ್ಲಿ ಆಗುತ್ತಿರುವ ಏರಿಳಿತದ ಬಗ್ಗೆ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ದೇಶದ ಅರ್ಥವ್ಯವಸ್ಥೆಯಲ್ಲಿ ವಿಶ್ವಾಸ ಇರಿಸಿ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಹೂಡಿಕೆದಾರರಿಗೆ ಮನವಿ ಮಾಡಿದ್ದಾರೆ.
ಜಾಗತಿಕ ವಿದ್ಯಮಾನಗಳ ಪ್ರಭಾವಕ್ಕೆ ಒಳಗಾಗಿ ದೇಶದ ಷೇರುಪೇಟೆ ಮತ್ತು ಕರೆನ್ಸಿ ಮಾರುಕಟ್ಟೆ ಇಳಿಮುಖವಾಗಿದೆ. ಆದರೆ, ದೇಶದ ಆರ್ಥಿಕತೆಯು ಬಲಿಷ್ಠ ತಳಹದಿಯ ಮೇಲೆ ನಿಂತಿರುವುದರಿಂದ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಗುರುವಾರದ ವಹಿವಾಟಿನಲ್ಲಿ ಬಿಎಸ್ಇ ಸೂಚ್ಯಂಕ 807 ಅಂಶ ಕುಸಿತ ಕಂಡಿತ್ತು. ಅಲ್ಲದೆ, ರೂಪಾಯಿ ಮೌಲ್ಯ 29 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿತ್ತು. ಈ ಬಗ್ಗೆ ಹೆಚ್ಚು ಕಳವಳಕ್ಕೆ ಒಳಗಾಗದಿರಿ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಜೇಟ್ಲಿ ಹೂಡಿಕೆ ದಾರರರಿಗೆ ತಿಳಿಹೇಳಿದ್ದಾರೆ.
ಜಾಗತಿಕ ಅರ್ಥಿಕತೆ ಮಂದಗತಿಯಲ್ಲಿದ್ದರೂ ಸಹ ಭಾರತ ಶೇ 7.5ರಷ್ಟು ಜಿಡಿಪಿ ಪ್ರಗತಿ ಸಾಧಿಸಿದೆ. ದೇಶದ ಅರ್ಥವ್ಯವಸ್ಥೆ ಬಲಿಷ್ಠವಾಗಿದೆ ಎನ್ನುವು ದಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಬೇಕಿಲ್ಲ. ಹೀಗಾಗಿ, ಉತ್ಪ್ರೇಕ್ಷಿತ ಆತಂಕ ಬೇಡ ಎಂದಿದ್ದಾರೆ.
ದೇಶದ ಪ್ರಗತಿಗಾಗಿ ಸರ್ಕಾರ ಸುಧಾರಣಾ ಕ್ರಮಗಳನ್ನು ಮುಂದುವರಿಸಲಿದೆ ಎಂದಿದ್ದಾರೆ.
ಸೂಚ್ಯಂಕ ಅಲ್ಪ ಚೇತರಿಕೆ
ಗುರುವಾರ 807 ಅಂಶಗಳಷ್ಟು ಭಾರಿ ಕುಸಿತ ಕಂಡಿದ್ದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್ಇ) ಶುಕ್ರವಾರ 34 ಅಂಶ ಚೇತರಿಕೆ ಕಂಡು, 22,986 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯಗೊಳಿಸಿತು.