ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಉದ್ಧಟತನಕ್ಕೆ ಸುಪ್ರೀಂ ಕೋರ್ಟ್ ಮತ್ತೊಂದು ಗುದ್ದು ನೀಡಿದೆ. ಐಪಿಎಲ್ ಬೆಟ್ಟಿಂಗ್ಗೆ ಸಂಬಂಧಿಸಿದಂತೆ ಇನ್ನಷ್ಟು ತನಿಖೆ ನಡೆಸಬೇಕೆಂದು ನಿವೃತ್ತ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ನೇತೃತ್ವದ ಸಮಿತಿಗೆ ಸುಪ್ರೀಂ ಕೋರ್ಟ್ ಸೂಚಿಸಿದ್ದು, ಮುದ್ಗಲ್ ಕೂಡಾ ಒಪ್ಪಿದ್ದಾರೆ. ಈ ದೇಶದಲ್ಲಿ ಕ್ರಿಕೆಟ್ ಜನಪ್ರಿಯತೆಯನ್ನೇ ಬಂಡವಾಳ ಮಾಡಿಕೊಂಡು ವಾಮಮಾರ್ಗಗಳಿಂದ ಹಣ ದೋಚಲು ಹಲವರು ಯತ್ನಿಸಿದ್ದಾರೆ. ಅಂತಹ ವಂಚಕರ ಕೂಟದ ಜತೆ ಕೆಲವು ಕ್ರಿಕೆಟ್ ಆಡಳಿತಗಾರರು, ಆಟಗಾರರು ಸೇರಿಕೊಂಡಿದ್ದಾರೆಂಬ ಬಗ್ಗೆ ಹಿಂದಿನಿಂದಲೂ ಗುಮಾನಿ ಇತ್ತು. ಮುದ್ಗಲ್ ಸಮಿತಿ ಅದೇ ಜಾಡಿನಲ್ಲಿ ಆಳವಾದ ತನಿಖೆ ನಡೆಸಿ, ಸಾಕ್ಷ್ಯಾಧಾರಗಳೊಂದಿಗೆ ಸಮಗ್ರ ವರದಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಿತ್ತು.
ಅದರಲ್ಲಿ ಚೆನ್ನೈ ಸೂಪರ್ಕಿಂಗ್ ತಂಡದ ಆಡಳಿತಗಾರರ ಪ್ರಸ್ತಾಪವಿತ್ತು. ಅದನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್ ಬಿಸಿಸಿಐ ಅಧ್ಯಕ್ಷರಾಗಿದ್ದ ಶ್ರೀನಿವಾಸನ್ ತಾತ್ಕಾಲಿಕವಾಗಿ ಕ್ರಿಕೆಟ್ ಮಂಡಳಿಯ ಆಡಳಿತದಿಂದ ದೂರವಿರಬೇಕೆಂದು ಆದೇಶಿಸಿತ್ತು. ಈ ಸಮಯದಲ್ಲಿ ಆಡಳಿತ ನೋಡಿಕೊಳ್ಳಲು ಹಿರಿಯ ಉಪಾಧ್ಯಕ್ಷ ಶಿವಲಾಲ್ ಯಾದವ್ ಅವರಿಗೆ ಸೂಚನೆ ನೀಡಿತ್ತು. ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಲಾಯಿತು, ನಿಜ. ಆದರೆ ಕಳ್ಳಾಟ, ಬೆಟ್ಟಿಂಗ್ ಇತ್ಯಾದಿ ಬಗ್ಗೆ ತನಿಖೆ ನಡೆಸಲು ಮೂವರು ಸದಸ್ಯರ ಸಮಿತಿಯೊಂದನ್ನು ಬಿಸಿಸಿಐ ಈಚೆಗೆ ನೇಮಿಸಿತು.
ಇಲ್ಲಿ ಮುದ್ಗಲ್ ಸಮಿತಿಯ ವರದಿಯನ್ನೇ ತಿರಸ್ಕಾರ ಮನೋಭಾವದಿಂದ ನೋಡಿದ್ದು ಎದ್ದು ಕಾಣುತ್ತದೆ. ಸಮಿತಿಯಲ್ಲಿರುವ ರವಿಶಾಸ್ತ್ರಿ ಅವರು ಬಿಸಿಸಿಐನಿಂದ ಸಂಭಾವನೆ ಪಡೆಯುತ್ತಿರುವವರ ಪಟ್ಟಿಯಲ್ಲಿದ್ದರೆ, ಜೆ.ಎನ್.ಪಟೇಲ್ ಅವರು ಪ್ರಸಕ್ತ ಮಂಡಳಿಯ ತಾತ್ಕಾಲಿಕ ಅಧ್ಯಕ್ಷ ಶಿವಲಾಲ್ಯಾದವ್ ಅವರ ಸಮೀಪ ಬಂಧು ಎನ್ನಲಾಗಿದೆ. ಆರ್.ಕೆ.ರಾಘವನ್ ಅವರಿಗೆ ಚೆನ್ನೈ ಕ್ರಿಕೆಟ್ ಸಂಸ್ಥೆಯ ಜತೆಗೆ ನಿಕಟ ನಂಟಿದೆ. ಈ ನೇಮಕಗಳು ಹಿತಾಸಕ್ತಿ ಸಂಘರ್ಷಕ್ಕೆ ಸ್ಪಷ್ಟ ನಿದರ್ಶನದಂತಿವೆ. ಕಳ್ಳಾಟದ ಆರೋಪಗಳ ಬಗ್ಗೆ ತನಿಖೆಗೆ ಸಂಬಂಧಿಸಿದಂತೆ ಏನು ಮಾಡಿದ್ದೀರೆಂದು ನ್ಯಾಯಾಲಯ ಬಿಸಿಸಿಐಯನ್ನು ಪ್ರಶ್ನಿಸಿತ್ತು. ಅದಕ್ಕೆ ಪ್ರತಿಕ್ರಿಯೆಯಾಗಿ ಈ ಸಮಿತಿಯನ್ನು ರಚಿಸಲಾಗಿದೆ. ಇದು ಬಿಸಿಸಿಐನ ಸ್ವಾಯತ್ತತೆಯನ್ನೇ ಪ್ರಶ್ನಿಸಿದಂತಿದೆ. ಈಚಿನ ದಿನಗಳಲ್ಲಿ ಬಿಸಿಸಿಐಗೆ ಆಗಿರುವ ಬಹಳಷ್ಟು ಮುಖಭಂಗದ ಪ್ರಕರಣಗಳಿಂದ ಅದು ಪಾಠ ಕಲಿತಿಲ್ಲ ಎಂಬುದು ಮಂಡಳಿಯ ಈ ನೇಮಕದಿಂದ ಸ್ಪಷ್ಟವಾಗಿದೆ. ಹೀಗಾಗಿ ಮುದ್ಗಲ್ ಅವರೇ ಇನ್ನಷ್ಟು ತನಿಖೆ ನಡೆಸಬೇಕೆಂದು ನ್ಯಾಯಪೀಠ ಕೋರಿರುವುದು ಬಿಸಿಸಿಐ ಪ್ರಸ್ತಾಪಿಸಿದ ಸಮಿತಿಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿದೆ.
ಕ್ರಿಕೆಟ್ ಮಂಡಳಿಯ 86 ವರ್ಷಗಳ ಇತಿಹಾಸದಲ್ಲಿ ಸುಪ್ರೀಂ ಕೋರ್ಟ್ ಈ ಮಟ್ಟಿಗೆ ಮಧ್ಯ ಪ್ರವೇಶಿಸಿರುವುದು ಇದೇ ಮೊದಲು. ಮುದ್ಗಲ್ ವರದಿಯ ಮಾಹಿತಿಗಳು ಗೊತ್ತಾದ ನಂತರವಾದರೂ ಈ ಕ್ರೀಡಾ ಸಂಸ್ಥೆಯ ಆಡಳಿತಗಾರರು ಪಶ್ಚಾತ್ತಾಪ ಪಡಬೇಕಿತ್ತು. ಆದರೆ ಹಾಗಾಗಿಲ್ಲ. ತನ್ನನ್ನು ಶುದ್ಧೀಕರಿಸಿಕೊಳ್ಳಲು ಸಿಕ್ಕಿದ ಅತ್ಯುತ್ತಮ ಅವಕಾಶದಲ್ಲಿಯೂ ಬಿಸಿಸಿಐ ಎಡವಿದಂತಿದೆ. ಹೀಗಾಗಿಯೇ ಸುಪ್ರೀಂ ಕೋರ್ಟ್, ಮುದ್ಗಲ್ ಅವರೇ ಇನ್ನಷ್ಟು ತನಿಖೆ ನಡೆಸಬೇಕೆಂದಿರುವುದು ಬಿಸಿಸಿಐನ ಅಹಂಕಾರದ ವರ್ತನೆಗೊಂದು ಪೆಟ್ಟು ನೀಡಿದಂತಿದೆ. ಈ ದೇಶದಲ್ಲಿ ಕ್ರಿಕೆಟ್ನ ಪಾವಿತ್ರ್ಯ ಉಳಿಸಿಕೊಳ್ಳುವಲ್ಲಿ ಇದೊಂದು ಶ್ಲಾಘನಾರ್ಹ ಬೆಳವಣಿಗೆ ಎನ್ನಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.