ನವದೆಹಲಿ: ವಿಧಾನಸಭೆ ಉಪ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದು, ಶಿಕಾರಿಪುರದಿಂದ ನಿರೀಕ್ಷೆಯಂತೆ ಬಿಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ. ವೈ. ರಾಘವೇಂದ್ರ ಕಣಕ್ಕಿಳಿಯಲಿದ್ದಾರೆ.
ಚಿಕ್ಕೋಡಿ– ಸದಲಗಾದಿಂದ ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಹಾಗೂ ಬಳ್ಳಾರಿ (ಪರಿಶಿಷ್ಟ ಪಂಗಡ– ಮೀಸಲು) ಯಿಂದ ಸಂಸದ ಶ್ರೀರಾಮುಲು ಅವರ ಆಪ್ತ ಓಬಳೇಶ್ ಅವರನ್ನು ಟಿಕೆಟ್ ನೀಡಲಾಗಿದೆ
.
ರಾಘವೇಂದ್ರ ಅವರು 2009ರ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ಬಂಗಾರಪ್ಪ ಅವರನ್ನು ಸೋಲಿಸಿ ಆಯ್ಕೆಯಾಗಿದ್ದರು.
ಚಿಕ್ಕೋಡಿ– ಸದಲಗಾ ಕ್ಷೇತ್ರದಿಂದ ಸ್ಪರ್ಧಿಸಲಿರುವ ಮಹಾಂತೇಶ ಕವಟಗಿಮಠ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ನ ಪ್ರಕಾಶ ಹುಕ್ಕೇರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಹುಕ್ಕೇರಿ ಅವರೂ ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಚುನಾಯಿತರಾಗಿದ್ದಾರೆ.
ಬಳ್ಳಾರಿ ಮೀಸಲು ಕ್ಷೇತ್ರ ಪ್ರತಿನಿಧಿಸಿದ್ದ ಮಾಜಿ ಸಚಿವ ಬಿ. ಶ್ರೀರಾಮುಲು ಲೊೋಕಸಭೆ ಪ್ರವೇಶಿಸಿದ್ದರಿಂದ ಉಪ ಚುನಾವಣೆ ನಡೆಯುತ್ತಿದೆ. ಶ್ರೀರಾಮುಲು ಅವರಿಗೆ ಆತ್ಮೀಯರಾದ ಓಬಳೇಶ್ ಅವರಿಗೆ ಬಿಜೆಪಿ ಟಿಕೆಟ್ ದೊರೆತಿದೆ.
ಜಿಲ್ಲಾ ಪಂಚಾಯತಿ ನೌಕರರಾಗಿದ್ದ ಅವರು ಸ್ವಯಂ ನಿವೃತ್ತಿ ಪಡೆದಿದ್ದಾರೆ. ಆಗಸ್ಟ್ 21ರಂದು ಉಪ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಆಗಸ್ಟ್ 2 ಕೊನೆಯ ದಿನ.
ಕಾಂಗ್ರೆಸ್ ಪಟ್ಟಿ ದೆಹಲಿಗೆ
ಬೆಂಗಳೂರು: ಚಿಕ್ಕೋಡಿ– ಸದಲಗಾ ಕ್ಷೇತ್ರದಲ್ಲಿ ಸಂಸದ ಪ್ರಕಾಶ್ ಹುಕ್ಕೇರಿ ಅವರ ಪುತ್ರ ಗಣೇಶ್ ಹುಕ್ಕೇರಿ, ಬಳ್ಳಾರಿಯಲ್ಲಿ ಮೊಳಕಾಲ್ಮೂರಿನ ಮಾಜಿ ಶಾಸಕ ಎನ್.ವೈ.ಗೋಪಾಲಕೃಷ್ಣ ಮತ್ತು ಶಿಕಾರಿಪುರದಲ್ಲಿ 2013ರ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಶಾಂತವೀರಪ್ಪಗೌಡ ಅವರಿಗೆ ಟಿಕೆಟ್ ನೀಡುವಂತೆ ಪ್ರದೇಶ ಕಾಂಗ್ರೆಸ್ ಸಮಿತಿ ಶಿಫಾರಸು ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಬುಧವಾರ ಮೂರೂ ಕ್ಷೇತ್ರಗಳ ಸ್ಥಳೀಯ ಮುಖಂಡರ ಜೊತೆ ಚರ್ಚೆ ನಡೆಸಿದ್ದರು. ಚಿಕ್ಕೋಡಿ ಕ್ಷೇತ್ರಕ್ಕೆ ಗಣೇಶ ಹುಕ್ಕೇರಿ ಹೆಸರು ಅಂತಿಮಗೊಳಿಸಲಾಗಿತ್ತು. ಶಿಕಾರಿಪುರಕ್ಕೆ ಶಾಂತವೀರಪ್ಪಗೌಡ ಮತ್ತು ನಗರದ ಮಹದೇವಪ್ಪ ಹೆಸರು ಚರ್ಚೆಯಲ್ಲಿತ್ತು. ಬಳ್ಳಾರಿಗೆ 19 ಆಕಾಂಕ್ಷಿಗಳಿದ್ದ ಕಾರಣ ಪಟ್ಟಿ ಅಂತಿಮಗೊಂಡಿರಲಿಲ್ಲ. ಗುರುವಾರ ಬೆಳಿಗ್ಗೆ ಮೂರೂ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿ ಎಐಸಿಸಿಗೆ ಶಿಫಾರಸು ಮಾಡಲಾಗಿದೆ. ಎಐಸಿಸಿ ಅನುಮೋದನೆ ದೊರೆತ ಬಳಿಕ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.
ಜೆಡಿಎಸ್ ಸ್ಪರ್ಧೆ ಇಲ್ಲ
ಬೆಂಗಳೂರು: ಈ ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದಿರಲು ಮತ್ತು ತಟಸ್ಥವಾಗಿರಲು ಜೆಡಿಎಸ್ ನಿರ್ಧರಿಸಿದೆ.
ಗುರುವಾರ ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ‘ಕಾಂಗ್ರೆಸ್ ರಾಜ್ಯದಲ್ಲಿ ಮತ್ತು ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿವೆ. ಈ ಎರಡೂ ಪಕ್ಷಗಳಿಗೆ ಹಣದ ಕೊರತೆ ಇಲ್ಲ. ಆದರೆ ನಮ್ಮ ಸ್ಥಿತಿ ಹಾಗಲ್ಲ. ಆದ್ದರಿಂದ ಉಪ ಚುನಾವಣೆಯಲ್ಲಿ ಸ್ಪರ್ಧೆ ಇಲ್ಲ’ ಎಂದರು.
ಎಚ್ಡಿಕೆ ಭಿನ್ನಮತ: ಆದರೆ ಈ ಸಂದರ್ಭದಲ್ಲಿ ಹಾಜರಿದ್ದ ಪಕ್ಷದ ಮುಖಂಡ ಎಚ್.ಡಿ. ಕುಮಾರಸ್ವಾಮಿ, ‘ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು ಎಂದು ಪಕ್ಷದ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. ಈ ಕುರಿತು ಚರ್ಚೆ ನಡೆಸಿ ತೀರ್ಮಾನಿಸಲಾಗುವುದು’ ಎಂದರು.
‘ಪಕ್ಷ ಬಲವರ್ಧನೆ’: ‘ನಾನು ಇನ್ನು ಮುಂದೆ ಹೆಚ್ಚಿನ ಸಮಯವನ್ನು ರಾಜ್ಯದಲ್ಲೇ ಕಳೆಯುತ್ತೇನೆ. ಕಾರ್ಯಕರ್ತರ ಸಮಾವೇಶವನ್ನು ಆಗಸ್ಟ್ನಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗುವುದು’ ಎಂದು ದೇವೇಗೌಡ ಹೇಳಿದರು.
ತಿದ್ದುಪಡಿ
ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಗುರುವಾರದ ಸಂಚಿಕೆಯಲ್ಲಿ ಪ್ರಕಟವಾದ ವರದಿಯಲ್ಲಿ ಚಿಕ್ಕೋಡಿ– ಸದಲಗಾ ಕ್ಷೇತ್ರದ ಹೆಸರು ತಪ್ಪಾಗಿ ಹುಕ್ಕೇರಿ ಎಂದು ಪ್ರಕಟವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.