‘ಪೊಲೀಸ್ಗೆ ಜ್ವರ, ಉಬರ್ಗೆ ಬರೆ!’ ಎಂಬ ಲೇಖನದಲ್ಲಿ ಕ್ಯಾಪ್ಟನ್ ಗೋಪಿನಾಥರು (ಪ್ರ.ವಾ., ಡಿ.17) ನೆಟ್ ಆಧರಿತ ಉಬರ್ ಟ್ಯಾಕ್ಸಿ ಸೇವೆಯನ್ನು ಶ್ಲಾಘಿಸಿದ್ದಾರೆ. ಎರಡು ದಿನಗಳ ಹಿಂದಷ್ಟೇ ‘ಆಲ್ಟರ್ನೆಟ್’ ಹೆಸರಿನ ಅಮೆರಿಕನ್ ಜಾಲಪತ್ರಿಕೆಯಲ್ಲಿ ‘ಉಬರ್ ಸೇವೆಯ ಏಳು ಕುಕೃತ್ಯಗಳು’ ಎಂಬ ಲೇಖನ ಬಂದಿದೆ.
1) ಹಬ್ಬದ ದಿನಗಳಲ್ಲಿ ಅದು ಬಾಡಿಗೆ ದರವನ್ನು ಸಿಕ್ಕಾಪಟ್ಟೆ ಹೆಚ್ಚಿಸುತ್ತದೆ; ಚಂಡಮಾರುತದಂಥ ಸಂಕಟ ಸಮಯದಲ್ಲಿ ಅದರ ಸುಲಿಗೆ ತಾರಕಕ್ಕೇರುತ್ತದೆ.
2) ತನಗೆ ಟ್ಯಾಕ್ಸಿ ಬೇಕೆಂದು ಸುಳ್ಳೇ ಸುಳ್ಳೇ ಪ್ರತಿಸ್ಪರ್ಧಿ ಟ್ಯಾಕ್ಸಿ ಕಂಪೆನಿಗಳಿಗೆ ಸಂದೇಶ ಕಳಿಸಿ ಆಮೇಲೆ ಕರೆಯನ್ನು ಕ್ಯಾನ್ಸಲ್ ಮಾಡಿ ಭಾರೀ ನಷ್ಟ ಉಂಟು ಮಾಡುತ್ತಿದೆ.
3) ಪ್ರತಿಸ್ಪರ್ಧಿ ಕಂಪೆನಿಗಳ ಮೇಲೆ ಯಾರೂ ಹಣ ಹೂಡದಂತೆ ಕುತಂತ್ರ ಮಾಡುತ್ತದೆ.
4) ತನ್ನ ಚಾಲಕಿಯರು ಎಷ್ಟು ಸೆಕ್ಸಿ ಆಗಿದ್ದಾರೆಂದು ಫ್ರಾನ್ಸ್ ದೇಶದಲ್ಲಿ ಪ್ರಚುರಪಡಿಸುತ್ತದೆ; ಅದನ್ನು ಬಯಲಿಗೆಳೆದು ಛೀಮಾರಿ ಹಾಕಿದ ಪತ್ರಕರ್ತೆಗೆ ‘ನಿಮ್ಮದೆಲ್ಲವನ್ನೂ ಬಯಲಿಗೆಳೆಯುತ್ತೇವೆ’ ಎಂದು ಹೆದರಿಸುತ್ತದೆ.
5) ತನ್ನ ಚಾಲಕ ಏನೇ ಮಾಡಿದರೂ ಅದು ತನ್ನ ತಪ್ಪಲ್ಲವೆಂದು ನುಣುಚಿಕೊಳ್ಳುತ್ತದೆ.
6) ಪ್ರಯಾಣಿಕರ ಸುರಕ್ಷೆಯ ತನ್ನೆಲ್ಲ ಹೊಣೆಯಿಂದ ನುಣುಚಿಕೊಳ್ಳುತ್ತದೆ.
7) ಅಂಗವಿಕಲರಿಗೆ ಪ್ರಯಾಣದ ಅವಕಾಶವನ್ನು ನಿರಾಕರಿಸುವ ಚಾಲಕರ ತಪ್ಪನ್ನು ನೋಡಿಯೂ ನೋಡದಂತಿರುತ್ತದೆ.
ಈ ಮೇಲಿನ ಎಲ್ಲ ಆರೋಪಗಳಿಗೂ ಸೂಕ್ತ ಸಾಕ್ಷ್ಯಗಳನ್ನು ನೀಡಿದ ಲೇಖಕ ಕ್ಲಿಫ್ ವೀದರ್ಸ್ಗೆ ದಿಲ್ಲಿಯಲ್ಲಿ ನಡೆದ ಘಟನೆಯ ಅರಿವೂ ಇದ್ದಂತಿಲ್ಲ. ಕಾರ್ಪೊರೇಟ್ ವ್ಯವಸ್ಥೆಯಲ್ಲಿ ಮೊದಮೊದಲಿಗೆ ಎಲ್ಲ ಕಂಪೆನಿಗಳೂ ಸುಶೀಲ, ಸುವ್ಯವಸ್ಥಿತ ನಡವಳಿಕೆಗಳನ್ನೇ ತೋರಿಸಿ ಗಿರಾಕಿಗಳನ್ನು ಸೆಳೆಯುತ್ತವೆ. ಅವುಗಳ ಕರಾಳ ಮುಖಗಳು ಬಯಲಿಗೆ ಬರುವಷ್ಟರಲ್ಲಿ ನಮಗೆ ಬೇರೆ ದಾರಿಗಳೇ ಉಳಿದಿರುವುದಿಲ್ಲ. ಉಬರ್ಗೆ ಆರಂಭದಲ್ಲೇ ಚುರುಕು ಮುಟ್ಟಿಸಿದ ನಮ್ಮ ಸರ್ಕಾರದ ನಡೆ ತಪ್ಪಾಗಿರಲಿಕ್ಕಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.