ವಾರ್ಷಿಕ ಹತ್ತು ಲಕ್ಷ ರೂಪಾಯಿಗಿಂತ ಹೆಚ್ಚು ತೆರಿಗೆಗೆ ಒಳಪಡುವ ಆದಾಯ ಹೊಂದಿರುವ ಗ್ರಾಹಕರಿಗೆ ಎಲ್ಪಿಜಿ ಸಬ್ಸಿಡಿ ಕಡಿತಗೊಳಿಸುವ ದಿಟ್ಟ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.
ಸರ್ಕಾರದ ಬಹುತೇಕ ಯೋಜನೆಗಳು ಉಳ್ಳವರ ಪಾಲಾಗುತ್ತಿರುವುದು ತಿಳಿದಿರುವ ಸಂಗತಿ. ಇಂತಹವರು ಒಮ್ಮೆ ನಮ್ಮ ಹಳ್ಳಿಗಳ ಬದುಕಿನತ್ತ ಕಣ್ಣಾಯಿಸಿದರೆ, ಹೆಣ್ಣು ಮಕ್ಕಳು ಉರುವಲು ಹೊಂದಿಸಲು ಎಷ್ಟು ಪಾಡು ಪಡುತ್ತಾರೆ ಎಂಬುದು ತಿಳಿಯುತ್ತದೆ. ಗಾಳಿ ಇಲ್ಲದ ಗೂಡಿನಂತಹ ಮನೆಗಳಲ್ಲಿ ಸೌದೆ ಬಳಸಿ ಅಡುಗೆ ಮಾಡುವುದರಿಂದ ಬಹುಪಾಲು ಮಹಿಳೆಯರು ಶ್ವಾಸಕೋಶ ಹಾಗೂ ಚರ್ಮದ ತೊಂದರೆಗೆ ಒಳಗಾಗುತ್ತಿದ್ದಾರೆ.
ಎಷ್ಟೋ ರಾಜಕಾರಣಿಗಳ ಮನೆಗಳಿಗೆ ತಿಂಗಳಿಗೆ ಅನಿಯಮಿತವಾಗಿ ಗ್ಯಾಸ್ ಸಿಲಿಂಡರ್ಗಳು ಸರಬರಾಜಾಗುತ್ತವೆ. ಅವು ಯಾರ್ಯಾರ ಹೆಸರಿನಲ್ಲಿವೆ ಎನ್ನುವುದೇ ನಿಗೂಢ. ಇಂತಹವರೆಲ್ಲ ಒಂದು ಸಲ ಆತ್ಮಾವಲೋಕನ ಮಾಡಿಕೊಳ್ಳಲಿ. ಅನರ್ಹರು ಬಿಟ್ಟುಕೊಡುವ ಒಂದು ಸಬ್ಸಿಡಿ ಒಬ್ಬ ಮಹಿಳೆಯನ್ನು ರೋಗದಿಂದ ಮುಕ್ತಗೊಳಿಸಬಲ್ಲದು ಎಂಬುದನ್ನು ಅರಿಯಲಿ.