ಬೆಂಗಳೂರು: ಉತ್ತರ ಕರ್ನಾಟಕ ಮತ್ತು ಕೋಲಾರ, ಚಾಮರಾಜನಗರ, ಕೊಡಗು ಜಿಲ್ಲೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿ ಡಿಸೆಂಬರ್ 2ರಂದು ಕರ್ನಾಟಕ ಬಂದ್ಗೆ ಕರೆ ನೀಡುವುದಾಗಿ ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಬೆಳಗಾವಿಯಲ್ಲಿ ₨400ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಸುವರ್ಣ ಸೌಧಕ್ಕೆ ವರ್ಷಕ್ಕೊಮ್ಮೆ ಅಧಿವೇಶನ ನಡೆಯುವಾಗ ಮಾತ್ರ ಸಚಿವರು ಭೇಟಿ ನೀಡುತ್ತಿದ್ದಾರೆ. ಉಳಿದಂತೆ ಆ ಭಾಗದ ಸಚಿವರೂ ಹೋಗುತ್ತಿಲ್ಲ. ಪ್ರತಿ ತಿಂಗಳು ಐವರು ಸಚಿವರಾದರೂ ಭೇಟಿ ನೀಡಬೇಕು ಎಂದು ಒತ್ತಾಯಿಸಿ ಅಕ್ಟೋಬರ್ 6ರಂದು ಸುವರ್ಣಸೌಧದೊಳಕ್ಕೆ ಎಮ್ಮೆಗಳನ್ನು ಕಳುಹಿಸುವ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ವಿಜ್ಞಾನಿಗಳ ಸನ್ಮಾನಕ್ಕೆ ಒತ್ತಾಯ
ಯಶಸ್ವಿ ಮಂಗಳಯಾನದಿಂದ ದೇಶಕ್ಕೆ ಕೀರ್ತಿ ತಂದ ಇಸ್ರೊ ವಿಜ್ಞಾನಿಗಳನ್ನು ಕನಿಷ್ಠ ಕರೆದು ಸನ್ಮಾನಿಸುವ ಸೌಜನ್ಯವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ತೋರಿಸಿಲ್ಲ. ಕ್ರೀಡಾಪಟುಗಳಿಗೆ ನಿವೇಶನ, ಗೌರವಧನ ನೀಡುವಂತೆ ಇಸ್ರೊ ವಿಜ್ಞಾನಿಗಳಿಗೂ ನೀಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಕುಮಾರ್ ಅಭಿಮಾನಿಗಳ ಸಂಘದ ಸಾ.ರಾ.ಗೋವಿಂದು, ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಎನ್.ಮೂರ್ತಿ ಉಪಸ್ಥಿತರಿದ್ದರು.