ಬೆಂಗಳೂರು: ಬೆಳಗಾವಿ ಜಿಲ್ಲೆಯ ಯಳ್ಳೂರ ಗ್ರಾಮದಲ್ಲಿ ಮಹಾರಾಷ್ಟ್ರ ರಾಜ್ಯದ ನಾಮಫಲಕ ತೆರವಿನ ವೇಳೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕಾರ್ಯಕರ್ತರು ಮಾಡಿದ ಪುಂಡಾಟಿಕೆಯನ್ನು ಖಂಡಿಸಿ ವಿವಿಧ ಸಂಘಟನೆಗಳ ಸದಸ್ಯರು ಮೈಸೂರು ಬ್ಯಾಂಕ್ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ಮಾಡಿದರು.
ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ ಕನ್ನಡ ವೇದಿಕೆ ಸದಸ್ಯರು, ‘ಎಂಇಎಸ್ ಕಾರ್ಯಕರ್ತರು, ಶಿವಸೇನೆ ಮುಖಂಡರು ಹಾಗೂ ಅವರ ಬೆಂಬಲಕ್ಕೆ ನಿಂತಿರುವ ರಾಜಕಾರಣಿಗಳನ್ನು ಕೂಡಲೇ ಬಂಧಿಸಬೇಕು’ ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಎಚ್.ಎಸ್.ದೊರೆಸ್ವಾಮಿ, ‘ಯಳ್ಳೂರ ಗ್ರಾಮದಲ್ಲಿದ್ದ ಅನಧಿಕೃತ ನಾಮಫಲಕ ಹೈಕೋರ್ಟ್ ಆದೇಶದಂತೆ ತೆರವುಗೊಳಿಸಲಾಗಿತ್ತು. ಆದರೆ, ಎಂಇಎಸ್ ಕಾರ್ಯಕರ್ತರು ಪುನಃ ನಾಮಫಲಕಗಳನ್ನು ಹಾಕಿದ್ದಾರೆ. ಅಲ್ಲದೆ, ಪೊಲೀಸರು ಮತ್ತು ಜನಸಾಮಾನ್ಯರ ಮೇಲೆ ಹಲ್ಲೆ ನಡೆಸಿ ಸಾರ್ವಜನಿಕ ಆಸ್ತಿಗೆ ನಷ್ಟ ಉಂಟುಮಾಡಿದ್ದಾರೆ. ಹೀಗೆ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು’ ಎಂದು ಒತ್ತಾಯಿಸಿದರು.
‘ಶಿವಸೇನೆ ಮತ್ತು ಎಂಇಎಸ್ ಕಾರ್ಯಕರ್ತರ ಪುಂಡಾಟಿಕೆ ಇಂದು ನಿನ್ನೆಯದಲ್ಲ. ಅವರನ್ನು ಸರಿದಾರಿಗೆ ತರಲು ಕನ್ನಡಿಗರೆಲ್ಲ ಒಂದಾಗಬೇಕಿದೆ. ಸರ್ಕಾರ ಬೆಳಗಾವಿ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾರ್ಖಾನೆಗಳನ್ನು ತೆರೆದು, ಅಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ನೀಡಬೇಕು. ಆ ಭಾಗದಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಾದರೆ ಪುಂಡರು ಸುಮ್ಮನಾಗುತ್ತಾರೆ’ ಎಂದರು.
ಪ್ರತಿಕೃತಿ ದಹನ: ಬೆಳಗಾವಿ ಶಾಸಕ ಸಂಭಾಜಿರಾವ್ ಪಾಟೀಲ್, ಎಂಇಎಸ್ ಮತ್ತು ಶಿವಸೇನೆ ಮುಖಂಡರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕನ್ನಡ ಸೇನೆ ಕಾರ್ಯಕರ್ತರು, ಶಿವಸೇನೆ ಹಾಗೂ ಎಂಇಎಸ್ ಕಾರ್ಯಕರ್ತರನ್ನು ಗಡಿಪಾರು ಮಾಡಬೇಕೆಂದರು.
ಸೇನೆಯ ಅಧ್ಯಕ್ಷ ಎಸ್.ಡಿ. ಚಿಕ್ಕಣ್ಣ, ‘ಸಂಭಾಜಿ ಪಾಟೀಲ್ ಅವರು ಕರ್ನಾಟಕದ ಶಾಸಕರಾಗಿದ್ದು, ಇಲ್ಲಿನ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ, ಮಹಾರಾಷ್ಟ್ರ ಗೂಂಡಾಗಳ ಪರವಾಗಿ ಶಾಂತಿಗೆ ಭಂಗ ತರುತ್ತಿದ್ದಾರೆ. ಅವರ ಬೆಂಬಲದಿಂದಾಗಿ ಬೆಳಗಾವಿ ಮತ್ತು ಆ ತಾಲೂಕಿನ ಗಡಿಭಾಗದಲ್ಲಿ ಶಿವಸೇನೆ ಹಾಗೂ ಎಂಇಎಸ್ ಕಾರ್ಯಕರ್ತರ ಪುಂಡಾಟಿಕೆ ಹೆಚ್ಚಿದೆ. ಹಗಲಲ್ಲೇ ಮಾರಕಾಸ್ತ್ರಗಳನ್ನು ಹಿಡಿದು ಹಲ್ಲೆಗೆ ಮುಂದಾಗುತ್ತಿರುವುದು ಕಾನೂನು ಸುವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ’ ಎಂದು ದೂರಿದರು.‘ಶಾಸಕ ಸಂಭಾಜಿ ಪಾಟೀಲ್ ಶಾಸಕತ್ವ ರದ್ದುಗೊಳಿಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.