ಬೆಳಗಾವಿ: ‘ಸುವರ್ಣ ವಿಧಾನಸೌಧದ ಮೇಲೆ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್) ಧ್ವಜ ಹಾರಿಸುವ ನಿರ್ಣಯವನ್ನು ಗುರುವಾರ ನಡೆದ ಮಹಾಮೇಳಾವ್ ನಲ್ಲಿ ಕೈಗೊಳ್ಳಲಾಗಿದೆ ಎಂದು ವಾಟ್ಸ್ ಆ್ಯಪ್ ನಲ್ಲಿ ಸಂದೇಶಗಳು ಹರಿದಾಡುತ್ತಿವೆ. ಇಲ್ಲಿ ಸದನ ನಡೆಯುವ ಸಂದರ್ಭದಲ್ಲೇ ಎಂಇಎಸ್ ಏಕೆ ಇಂಥ ನಿರ್ಣಯ ತೆಗೆದುಕೊಳ್ಳುತ್ತದೆ? ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು’ ಎಂದು ಬಿಜೆಪಿಯ ಎಸ್. ಸುರೇಶ್ ಕುಮಾರ್ ವಿಧಾನಸಭೆಯಲ್ಲಿ ಗುರುವಾರ ಒತ್ತಾಯಿಸಿದರು.
ಅವರ ಮಾತಿಗೆ ಎಲ್ಲ ಪಕ್ಷಗಳ ಸದಸ್ಯರಿಂದ ಬೆಂಬಲ ವ್ಯಕ್ತವಾಯಿತು. ಕನ್ನಡಿಗರಿಗೆ ಅವಮಾನವಾಗುವಂಥ ಯಾವುದೇ ನಿರ್ಣಯಗಳನ್ನು ಸರ್ಕಾರ ಸಹಿಸಬಾರದು ಎಂದು ಅನೇಕ ಸದಸ್ಯರು ಒತ್ತಾಯಿಸಿದರು. ‘ರಾಜ್ಯಕ್ಕೆ ಅವಮಾನ ಆಗುವಂತೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಭರವಸೆ ನೀಡಿದರು.