ನವದೆಹಲಿ (ಪಿಟಿಐ/ಐಎಎನ್ಎಸ್): ಲೋಕಸಭಾ ಚುನಾವಣೆಯಲ್ಲಿ ಕಳಪೆ ಸಾಧನೆ ತೋರಿದ ಹಿನ್ನೆಲೆಯಲ್ಲಿ ದೆಹಲಿ ವಿಧಾನಸಭೆಯ ಕೆಲವು ಎಎಪಿ ಶಾಸಕರ ಬಯಕೆಯಂತೆ, ಮತ್ತೆ ಸರ್ಕಾರ ರಚಿಸಲು ಆ ಪಕ್ಷವನ್ನು ಬೆಂಬಲಿಸುವ ಬದಲಿಗೆ ಹೊಸದಾಗಿ ಚುನಾವಣೆ ಎದುರಿಸಲು ಕಾಂಗ್ರೆಸ್ ಇಚ್ಛಿಸಿದೆ.
ಈ ಸಂಬಂಧ ಭಾನುವಾರ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ದೆಹಲಿ ಪ್ರದೇಶ ಕಾಂಗ್ರೆಸ್ ಘಟಕದ ಮುಖ್ಯ ವಕ್ತಾರ ಮುಕೇಶ್ ಶರ್ಮ, ವಿಧಾನಸಭೆ ವಿಸರ್ಜನೆಗೆ ಕೋರಿ ಮತ್ತು ಹೊಸದಾಗಿ ಚುನಾವಣೆಗೆ ಆಗ್ರಹಿಐಸಿ ಎಎಪಿ ಸುಪ್ರೀಂಕೋರ್ಟ್ ಮೊರೆ ಹೋಗಿರುವುದರಿಂದ ದೆಹಲಿಯಲ್ಲಿ ಮತ್ತೆ ಸರ್ಕಾರ ರಚಿಸುವ ಬಗ್ಗೆ ಮಾತನಾಡಲು ಆ ಪಕ್ಷಕ್ಕೆ ಯಾವ ನೈತಿಕತೆಯೂ ಇಲ್ಲ ಎಂದು ಟೀಕಿಸಿದರು.
ಎಎಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಕಾಂಗ್ರೆಸ್ ವಾಪಸ್ ಪಡೆದಿಲ್ಲ. ಅದರ ನಾಯಕ ಕೇಜ್ರಿವಾಲ್ ಅವರೇ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟು, ಸರ್ಕಾರ ತ್ಯಜಿಸುವ ಮೂಲಕ ದೆಹಲಿ ಜನರನ್ನು ನಡುನೀರಿನಲ್ಲಿ ಕೈಬಿಟ್ಟರು. ಈಗ ಲೋಕಸಭಾ ಚುನಾವಣೆಯಲ್ಲಿ ಎಎಪಿ ಯಶಸ್ವಿಯಾಗದ ಕಾರಣ ಮತ್ತೆ ಸರ್ಕಾರ ರಚಿಸುವ ಮಾತನಾಡುತ್ತಿದೆ ಎಂದು ಶರ್ಮ ಆರೋಪಿಸಿದರು.
‘ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸುವುದಿಲ್ಲ’: ಕಾಂಗ್ರೆಸ್ ಬೆಂಬಲದೊಂದಿಗೆ ಮತ್ತೆ ದೆಹಲಿಯಲ್ಲಿ ಸರ್ಕಾರ ರಚಿಸುವ ಯಾವುದೇ ಉದ್ದೇಶ ತನಗಿಲ್ಲ ಎಂದು ಎಎಪಿ ಭಾನುವಾರ ಇಲ್ಲಿ ಸ್ಪಷ್ಟಪಡಿಸಿದೆ.
ಕೆಲವು ಎಎಪಿ ಶಾಸಕರ ಗುಂಪೊಂದು ಕಾಂಗ್ರೆಸ್ ನೆರವಿನಿಂದ ಪುನಃ ದೆಹಲಿಯಲ್ಲಿ ಸರ್ಕಾರ ರಚಿಸಬೇಕೆಂದು ಬಯಸಿದೆ ಎಂಬ ವದಂತಿಗೆ ಪಕ್ಷದ ಹಿರಿಯ ನಾಯಕ ಮನೀಶ್ ಸಿಸೋಡಿಯ ಪ್ರತಿಕ್ರಿಯಿಸಿದರು.
ಒಟ್ಟು ೭೦ ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ ಬಿಜೆಪಿ ೩೧, ಎಎಪಿ ೨೭ ಹಾಗೂ ಕಾಂಗ್ರೆಸ್ ೮ ಶಾಸಕರನ್ನು ಹೊಂದಿವೆ. ಆದರೆ ಮೂವರು ಬಿಜೆಪಿ ಶಾಸಕರು ಈಗ ಸಂಸದರಾಗಿ ಆಯ್ಕೆಯಾಗಿದ್ದಾರೆ.
ಸರ್ಕಾರ ರಚನೆಗೆ ಶಾಸಕರ ಒತ್ತಾಯ
ಲೋಕಪಾಲ ಮಸೂದೆ ಅಂಗೀಕಾರಕ್ಕೆ ವಿಫಲವಾದ ಹಿನ್ನೆಲೆಯಲ್ಲಿ ಎಎಪಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರಾಜೀನಾಮೆ ಸಲ್ಲಿಸಿದ ಕಾರಣ ದೆಹಲಿಯಲ್ಲಿ ಫೆ.೧೪ರಿಂದ ರಾಷ್ಟ್ರಪತಿ ಆಡಳಿತ ವಿಧಿಸಲಾಗಿದೆ. ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ದೆಹಲಿಯ ಎಲ್ಲ ಏಳು ಕ್ಷೇತ್ರಗಳಲ್ಲೂ ಕಾಂಗ್ರೆಸ್ ನೆಲಕಚ್ಚಿದ್ದು, ಎಎಪಿ ಎರಡನೇ ಸ್ಥಾನದಲ್ಲಿದೆ.
ಮೊದಲ ಸ್ಥಾನ ಪಡೆದಿರುವ ಬಿಜೆಪಿಯಂತೆಯೇ ಎಎಪಿ ಮತ್ತು ಕಾಂಗ್ರೆಸ್ ಪಕ್ಷಗಳು ಸಹ ದೆಹಲಿ ವಿಧಾನಸಭೆಗೆ ಹೊಸದಾಗಿ ಚುನಾವಣೆ ನಡೆಯಬೇಕೆಂದು ಆಗ್ರಹಿಸುತ್ತಿವೆ.ಈ ಮಧ್ಯೆ, ಎಎಪಿಯ ಕೆಲವು ಶಾಸಕರು ಬಿಜೆಪಿ ಅಥವಾ ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸಬೇಕೆಂದು ಪಕ್ಷದ ನಾಯಕರನ್ನು ಶನಿವಾರ ಒತ್ತಾಯಿಸಿದ್ದಾರೆ. ಬಿಜೆಪಿ-–ಮೋದಿ ಅಲೆ ಇರುವ ಈ ಸಂದರ್ಭದಲ್ಲಿ ಚುನಾವಣೆಗೆ ಹೋದರೆ ತಮಗೆ ಸಂಕಷ್ಟ ಕಾದಿದೆ. ಹಾಗಾಗಿ ಮತ್ತೆ ಸರ್ಕಾರ ರಚನೆಗೆ ಮುಂದಾಗಬೇಕೆಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.