ನವದೆಹಲಿ (ಪಿಟಿಐ): ಆಮ್ ಆದ್ಮಿ ಪಕ್ಷದಲ್ಲಿ (ಎಎಪಿ) ಆಂತರಿಕ ಕಚ್ಚಾಟ ಭುಗಿಲೆದ್ದ ಬೆನ್ನಲ್ಲಿಯೇ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ಭಿನ್ನಮತೀಯರ ಮನವೊಲಿಕೆಗೆ ಯತ್ನಿಸುತ್ತಿದ್ದಾರೆ.
‘ಯೋಗೇಂದ್ರ ಯಾದವ್ ಅವರು ಎತ್ತಿದ ಪ್ರಮುಖ ವಿಷಯಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕಿದೆ’ ಎಂದು ಕೇಜ್ರಿವಾಲ್ ಅವರು ಶನಿವಾರ ತಮ್ಮ ಮಾತಿನ ವರಸೆ ಬದಲಾಯಿಸಿದ್ದಾರೆ.
‘ದೆಹಲಿಯಲ್ಲಿ ಮುಂಬರುವ ವಿಧಾನ ಸಭೆ ಚುನಾವಣೆಗೆ ಮಾಡಿಕೊಳ್ಳಬೇಕಾದ ಸಿದ್ಧತೆಯೂ ಸೇರಿದಂತೆ ಪಕ್ಷದ ಮುಂದಿನ ನಡೆಯನ್ನು ನಿರ್ಧರಿಸಲು ಪ್ರಮುಖ ಮುಖಂಡರು ಶನಿವಾರ ಸಭೆ ಸೇರಿದ್ದರು. ಶಾಜಿಯಾ ಇಲ್ಮಿ ಅವರನ್ನು ಪಕ್ಷಕ್ಕೆ ಮರಳಿ ಕರೆತರಲು ಪ್ರಯತ್ನ ಮಾಡಲಾಗುತ್ತದೆ’ ಎಂದು ಅವರು ನುಡಿದರು.
‘ಯೋಗೇಂದ್ರ ಯಾದವ್ ಕೆಲವೊಂದು ಪ್ರಮುಖ ವಿಷಯಗಳನ್ನು ಎತ್ತಿದ್ದಾರೆ. ನಾವೆಲ್ಲ ಸೇರಿ ಇವುಗಳನ್ನು ಇತ್ಯರ್ಥಪಡಿಸಿಕೊಳ್ಳುತ್ತೇವೆ. ಯೋಗೇಂದ್ರ ನನಗೆ ಪರಮಾಪ್ತರು. ಅವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದೆ’ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.