ನವದೆಹಲಿ (ಪಿಟಿಐ): ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರೊಂದಿಗಿನ ಬಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಶಾಜಿಯಾ ಇಲ್ಮಿ ಮತ್ತು ಜಿ.ಆರ್.ಗೋಪಿನಾಥ್ ಅವರು ಶನಿವಾರ ಎಎಪಿಗೆ ವಿದಾಯ ಹೇಳಿದ್ದಾರೆ.
ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರಾದ ಶಾಜಿಯಾ ಇಲ್ಮಿ ಅವರು ``ಪಕ್ಷದೊಳಗಿನ ರಾಜಕೀಯ' ಮತ್ತು ಕೇಜ್ರಿವಾಲ್ ಅವರ ಸುತ್ತಲಿನ `ಮಿತ್ರಕೂಟ'ದ ವರ್ತನೆಯಿಂದ ನಾನು ಪಕ್ಷದ ಎಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದೇನೆ' ಎಂದು ಹೇಳಿದ್ದಾರೆ.
ಜನವರಿಯಲ್ಲಿ ಪಕ್ಷ ಸೇರಿದ್ದ ಕಡಿಮೆ ದರದ ವಿಮಾನಯಾನ ಪ್ರವರ್ತಕ ಗೋಪಿನಾಥ್ ಅವರು ಬಿಜೆಪಿ ಮುಖಂಡ ನಿತಿನ್ ಗಡ್ಕರಿ ಅವರು ದಾಖಲಿಸಿದ್ದ ಮಾನನಷ್ಟ ಪ್ರಕರಣದಲ್ಲಿ ಜಾಮೀನಿಗಾಗಿ ಬಾಂಡ್ ನೀಡಲು ನಿರಾಕರಿಸಿದ ಕೇಜ್ರಿವಾಲ್ ಅವರ ವರ್ತನೆಯಿಂದ ಪಕ್ಷ ತೊರೆದಿರುವುದಾಗಿ ತಿಳಿಸಿದ್ದಾರೆ.