ವಾರಾಣಸಿ/ ಶ್ರೀನಗರ (ಪಿಟಿಐ): ಆಮ್ ಆದ್ಮಿ ಪಕ್ಷದ ಆಂತರಿಕ ಕಚ್ಚಾಟವನ್ನು ಹಲವು ಪಕ್ಷಗಳು ಟೀಕಿಸಿವೆ. ಎಎಪಿ ‘ಬಾಲಿಶ’ ರಾಜಕಾರಣದಿಂದ ಅವಕಾಶ ವ್ಯರ್ಥಮಾಡುವುದನ್ನು ಬಿಟ್ಟು, ಜನತೆಗೆ ನೀಡಿರುವ ಭರವಸೆಗಳನ್ನು ಈಡೇರಿಸಬೇಕು ಎಂದು ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಸಲಹೆ ನೀಡಿದ್ದಾರೆ.
‘ಎಎಪಿಯಿಂದ ಇಂಥ ರಾಜಕಾರಣ ನಿರೀಕ್ಷಿಸಿರಲಿಲ್ಲ. ದೆಹಲಿ ಜನರು ವ್ಯಾಪಕ ನಿರೀಕ್ಷೆಗಳೊಂದಿಗೆ ಎಎಪಿಯನ್ನು ಆಯ್ಕೆ ಮಾಡಿದ್ದಾರೆ. ಎಎಪಿ ಹಾಗೂ ಅದರ ಮುಖಂಡರು ಜನತೆಗೆ ನೀಡಿರುವ ಭರವಸೆಗಳನ್ನು ಈಡೇರಿಸಲೇಬೇಕು. ಬಾಲಿಶ ರಾಜಕಾರಣದಿಂದ ಇಂಥ ಐತಿಹಾಸಿಕ ಅವಕಾಶವನ್ನು ಎಎಪಿ ವ್ಯರ್ಥ ಮಾಡಿಕೊಳ್ಳಬಾರದು’ ಎಂದಿದ್ದಾರೆ.
ಎಎಪಿಯು ಇತರೆ ಪಕ್ಷಗಳಂತೆ ಆಗಲು ನಿರ್ಧರಿಸಿದಂತಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟೀಕಿಸಿದ್ದಾರೆ.
‘ಎಎಪಿಯನ್ನು ಅನುಕರಿಸುವಂತೆ ಟೀಕಾಕಾರರು ಹಳೆಯ ಪಕ್ಷಗಳಿಗೆ ಸಲಹೆ ನೀಡುತ್ತಿದ್ದರು. ಆದರೆ ಇದೀಗ ಎಎಪಿ ಎಲ್ಲ ಪಕ್ಷಗಳಂತೆ ಆಗಲು ನಿರ್ಧರಿಸಿದಂತಿದೆ’ ಎಂದು ನ್ಯಾಷನಲ್ ಕಾನ್ಫೆರೆನ್ಸ್ ಪಕ್ಷದ ಮುಖ್ಯಸ್ಥ ಒಮರ್ ಟ್ವೀಟ್ ಮಾಡಿದ್ದಾರೆ.