ತುಮಕೂರು: ಎಚ್ಎಂಟಿ ಕಾರ್ಖಾನೆ ಮುಚ್ಚಲು ಕೇಂದ್ರ ಸರ್ಕಾರ ನಿರ್ಧರಿಸಿರುವುದರಿಂದ ಅದೇ ಜಾಗದಲ್ಲಿ ರೈಲ್ವೆ ವಿಶ್ವವಿದ್ಯಾಲಯ ಸ್ಥಾಪಿಸುವಂತೆ ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಡಿ.ವಿ.ಸದಾನಂದಗೌಡ ಅವರಿಗೆ ಮನವಿ ಸಲ್ಲಿಸುವುದಾಗಿ ಮಾಜಿ ಸಚಿವ ಎಸ್.ಶಿವಣ್ಣ ಇಲ್ಲಿ ಸೋಮವಾರ ಹೇಳಿದರು.
ಎಚ್ಎಂಟಿಯಲ್ಲಿ 120 ಎಕರೆ ಜಾಗವಿದೆ. ಫ್ಯಾಕ್ಟರಿಯ ಕಟ್ಟಡಗಳಿವೆ. ಈ ಕಟ್ಟಡಗಳನ್ನು ವಿ.ವಿ.ಗೆ ಬಳಸಿಕೊಳ್ಳಬಹುದು. ಈ ಹಿಂದೆ ಎನ್ಡಿಎ ಸರ್ಕಾರ ಇದ್ದಾಗ ಇದನ್ನು ರಕ್ಷಣಾ ಇಲಾಖೆಗೆ ಬಳಸಿಕೊಳ್ಳುವಂತೆ ಸಲಹೆ ನೀಡಲಾಗಿತ್ತು. ಆದರೆ ಕಡೇಗಳಿಗೆಯಲ್ಲಿ ಇದು ಸಾಧ್ಯವಾಗಿರಲಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅಣ್ಣೇನಹಳ್ಳಿ ಬಳಿ 450 ಎಕರೆ ಜಾಗದಲ್ಲಿ ರೈಲ್ವೆ ಯಾರ್ಡ್ ಬರಲಿದೆ. ಬೆಂಗಳೂರಿಗೆ ಹತ್ತಿರವಿದೆ. ಅಲ್ಲದೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಬಂದರು ಸಂಪರ್ಕವೂ ಇರುವುದರಿಂದ ಇಲ್ಲಿಯೇ ವಿ.ವಿ. ಸ್ಥಾಪಿಸುವುದು ಸೂಕ್ತ ಎಂದು ರೈಲ್ವೆ ಸಚಿವರಿಗೆ ಮನವರಿಕೆ ಮಾಡಿಕೊಡುವುದಾಗಿ ಹೇಳಿದರು.
ಎಚ್ಎಂಟಿ ಪುನಶ್ಚೇತನಕ್ಕೆ ಸಂಸದ ಎಸ್.ಪಿ.ಮುದ್ದಹನುಮೇಗೌಡ ಪ್ರಯತ್ನ ಒಳ್ಳೆಯದು. ಅದಕ್ಕೆ ವಿರೋಧ ಇಲ್ಲ. ಆದರೆ ಪರ್ಯಾಯ ಯೋಚನೆ ಬಂದಾಗ ಇಲ್ಲಿ ವಿ.ವಿ. ಸ್ಥಾಪಿಸಲಿ. ಕೇಂದ್ರ ಸರ್ಕಾರ ಈಗಾಗಲೇ ನಿರ್ಧಾರ ಮಾಡಿರುವುದರಿಂದ ಪುನಶ್ಚೇತನ ಕಷ್ಟದ ಮಾತು ಎಂದರು.
ಲಾಯಕ್ಕಿಲ್ಲ: ಟಿ.ಬಿ.ಜಯಚಂದ್ರ ಅವರಿಗೆ ಉಸ್ತುವಾರಿ ಸಚಿವರಾಗಲು ಲಾಯಕ್ಕಿಲ್ಲ. ಹೇಮಾವತಿ ವಿಷಯದಲ್ಲಿ ಜಿಲ್ಲೆಯ ರಾಜಕಾರಣಿಗಳು ಬಾಯಿ ಚಪಲ ತೀರಿಸಿಕೊಳ್ಳುತ್ತಿದ್ದಾರೆ ಎಂದು ಎಚ್.ಡಿ.ದೇವೇಗೌಡರ ಮಾತಿಗೆ ನನ್ನ ಸಹಮತವಿದೆ. ಶಿರಾದ ಜನರು ಎಷ್ಟು ನೀರು ಕುಡಿಯುತ್ತಾರೆ. ನೀರಿನ ಸಮಸ್ಯೆ ಬಗೆಹರಿಸುವ ಬದಲಿಗೆ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಘನತ್ಯಾಜ್ಯ ಸಮಸ್ಯೆ ಬಗೆಹರಿಸಿಲ್ಲ. ನನ್ನ ಕಾಲದಲ್ಲಿ ಆರಂಭವಾದ ಕೆಲಸಗಳನ್ನು ಪೂರ್ಣಗೊಳಿಸಿದರೂ ಸಾಕು. ಆದರೆ ಕಮಿಷನ್ಗಾಗಿ ಯಾವುದೇ ಕೆಲಸ ಪೂರ್ಣಗೊಳ್ಳಲು ಬಿಡುತ್ತಿಲ್ಲ. ಶಾಸಕ ಡಾ.ರಫೀಕ್ ಅಹಮದ್ಗೆ ಕುರಾನ್ ಗೊತ್ತಿಲ್ಲ, ಅವರ ಮಾವನಿಗೂ ಗೊತ್ತಿಲ್ಲ. ನನ್ನ ಮನೆಯಲ್ಲಿ ಕುರಾನ್, ಬೈಬಲ್, ಭಗವತ್ ಗೀತೆ ಗ್ರಂಥಗಳಿವೆ ಎಂದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಕೆ.ಪಿ.ಮಹೇಶ್, ಯುವ ಘಟಕದ ಸನತ್, ಬನಶಂಕರಿ ಬಾಬು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.