ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಡಿಕೆಗಾಗಿ ಭೀಮವ್ವನ ಕನವರಿಕೆ

12 ದಿನಗಳಿಂದ ಊಟ, ನಿದ್ದೆ ಇಲ್ಲ
Last Updated 29 ಜುಲೈ 2016, 19:30 IST
ಅಕ್ಷರ ಗಾತ್ರ

ಸಿರವಾರ (ರಾಯಚೂರು ಜಿಲ್ಲೆ):  ಸಮೀಪದ ಪಟಕಂದೊಡ್ಡಿ ಗ್ರಾಮದ ವೃದ್ಧೆ ಭೀಮವ್ವ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಬರುವಿಕೆಗಾಗಿ 12 ದಿನಗಳಿಂದ ಊಟ, ನಿದ್ದೆ ಇಲ್ಲದೆ ಕನವರಿಸುತ್ತಿದ್ದಾರೆ.

‘ಕಾಂಗ್ರೆಸ್‌ ಸರ್ಕಾರ ರೈತರ ಸಾಲ ಮನ್ನಾ ಮಾಡುತ್ತಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದರು’ ಎಂದು ಜನರು ಆಡುವ ಮಾತನ್ನು ಕೇಳಿಸಿಕೊಂಡ ಭೀಮವ್ವ, ‘ಕುಮಾರಸ್ವಾಮಿ ಅವರಿಂದ ಮಾತ್ರ ಸಾಲ ಮನ್ನಾ ಮಾಡಲು ಸಾಧ್ಯ. ಆದ್ದರಿಂದ ಅವರು ನನ್ನ ಭೇಟಿಗೆ ಬರುವವರೆಗೂ ಆಹಾರ ಸೇವಿಸುವುದಿಲ್ಲ, ನಿದ್ರೆ ಮಾಡುವುದಿಲ್ಲ’ ಎಂದು ಹಟ ಹಿಡಿದಿದ್ದಾರೆ.

ಭೀಮವ್ವನ ಕುಟುಂಬದವರು ಜಮೀನು ಆಧಾರವಾಗಿಟ್ಟು ₹ 3.50 ಲಕ್ಷ ಸಾಲ ಮಾಡಿದ್ದಾರೆ. ಇವರಿಗೆ ನಾಲ್ವರು ಪುತ್ರರು ಇದ್ದು, ಕೂಲಿ ಕೆಲಸ ಮಾಡುತ್ತಾರೆ. ಪತಿ ಮೃತಪಟ್ಟಿದ್ದಾರೆ.

ಮುಖಂಡರ ಮನವೊಲಿಕೆ: ವಿಷಯ ತಿಳಿದ ಜೆಡಿಎಸ್  ಜಿಲ್ಲಾ ಪಂಚಾಯಿತಿ ಸದಸ್ಯ ಮಹಾಂತೇಶ ಪಾಟೀಲ್ ಅತ್ತನೂರು, ಜೆಡಿಎಸ್ ರಾಜ್ಯ ಘಟಕದ ಕಾರ್ಯದರ್ಶಿ ರಾಜ ವೆಂಕಟಪ್ಪ ನಾಯಕ ಅವರು ಭೀಮವ್ವ ಮನೆಗೆ ಭೇಟಿ ನೀಡಿದ್ದರು. ‘ಕುಮಾರಸ್ವಾಮಿ ಅವರನ್ನು ಕರೆದುಕೊಂಡು ಬರುತ್ತೇವೆ. ಊಟ ಮಾಡಿ ಎಂದು ಮನವಿ ಮಾಡಿದರೂ ಅವರು ಆಹಾರ ಸೇವಿಸಿಲ್ಲ. ನಂತರ ಕುಮಾರಸ್ವಾಮಿ ಅವರಿಗೆ ಕರೆ ಮಾಡಿ ಜೊತೆ ಮಾತನಾಡಿಸಲಾಯಿತು. ಆದರೆ ಭೀಮವ್ವ ಒಪ್ಪಲಿಲ್ಲ.

ಕುಮಾರಸ್ವಾಮಿ ಅವರು ಒಂದು ವಾರದೊಳಗಾಗಿ ಭೇಟಿಗೆ ಬರುವುದಾಗಿ ಭರವಸೆ ನೀಡಿದ ನಂತರ ಹಣ್ಣಿನ ರಸ ಸೇವಿಸಿದರು’ ಎಂದು ಮಾಹಿತಿ ನೀಡಿದರು.

‘ಭೀಮವ್ವ ಅವರ ಆರೋಗ್ಯ ಸ್ಥಿರವಾಗಿದೆ’ ಎಂದು ವೈದ್ಯರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT