ಬೆಂಗಳೂರು: ಕುಡಿಯುವ ನೀರು ಸಮಾಜದ ಮೂಲಭೂತ ಅಗತ್ಯ ಎಂದು ಅಭಿಪ್ರಾಯಪಟ್ಟಿರುವ ಪ್ರಾದೇಶಿಕ ಉನ್ನತಾಧಿಕಾರ ಸಮಿತಿಯು (ಆರ್ಇಸಿ) ಎತ್ತಿನ ಹೊಳೆ ಯೋಜನೆಗೆ ಷರತ್ತು ಬದ್ಧ ಅನುಮತಿ ನೀಡಿದೆ.
ಈ ಸಮಿತಿಯು ಇದೇ 18ರಂದು ಯೋಜನಾ ಸ್ಥಳಕ್ಕೆ ಮತ್ತು ಯೋಜನೆಯಿಂದ ಮುಳುಗಡೆ ಆಗುವ ಪ್ರದೇಶಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದೆ. ಈ ಸಂಬಂಧ ಸೋಮವಾರ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿತು.
ಆತಂಕ ಬೇಡ: ಈ ಯೋಜನೆಗೆ ಪರಿಸರವಾದಿಗಳು ಪ್ರಮುಖವಾಗಿ ಆಕ್ಷೇಪ ಎತ್ತಿದ್ದರು. ಅವರು ವ್ಯಕ್ತಪಡಿಸಿದ ಆತಂಕಗಳನ್ನು ಸಮಿತಿಯು ಅಲ್ಲಗಳೆದಿದೆ.
ಪಶ್ಚಿಮ ಘಟ್ಟದಲ್ಲಿರುವ ಬಲು ಅಪರೂಪದ ಜೀವವೈವಿಧ್ಯ ಉಳಿಸುವುದಕ್ಕಾಗಿ ಈ ಯೋಜನೆಗೆ ಅನುಮತಿ ನೀಡಬಾರದು ಕೂಗು ಕೂಡ ಕೇಳಿ ಬಂದಿತ್ತು.
ಆದರೆ, ಈ ವಾದಗಳು ಯೋಜನೆಯನ್ನು ತಡೆಯುವುದಕ್ಕೆ ಪರಿಸರವಾದಿಗಳು ಹಾಕುತ್ತಿರುವ ಒತ್ತಡ ತಂತ್ರ ಎಂದು ಸಮಿತಿ ಅಭಿಪ್ರಾಯ ಪಟ್ಟಿದೆ. ಈ ಯೋಜನೆಯನ್ನು ತಾಂತ್ರಿಕವಾಗಿ ವಿಶ್ಲೇಷಿಸುವ ಪರಿಣತಿಯನ್ನು ಸಮಿತಿ ಹೊಂದಿಲ್ಲ. ಆದರೆ, ಅಲ್ಲಿನ ಪರಿಸ್ಥಿತಿಯನ್ನು ಕೂಲಂಕಷ ಅಧ್ಯಯನ ನಡೆಸಿರುವುದಾಗಿ ಸಮಿತಿ ಹೇಳಿಕೊಂಡಿದೆ.
ಎರಡು ಕಿಂಡಿ ಅಣೆಕಟ್ಟೆಗಳನ್ನು ನಿರ್ಮಿಸುವ ಜಾಗದಲ್ಲಿ ಮಾತ್ರ ಜೀವವೈವಿಧ್ಯಗಳಿಂದ ಕೂಡಿದ ಸಸ್ಯ ಸಂಪತ್ತು ನಾಶವಾಗಲಿದೆ. ಉಳಿದ ಕಡೆಗಳಲ್ಲಿ ಅರಣ್ಯ ಪ್ರದೇಶ ನಾಶವಾದರೂ, ಮತ್ತೆ ಹಸಿರನ್ನು ಸೃಷ್ಟಿಸಬಹುದು ಎಂದು ಸಮಿತಿ ಪ್ರತಿಪಾದಿಸಿದೆ.
ಮುಳುಗಡೆಯಾಗುವ ಹೆಚ್ಚಿನ ಪ್ರದೇಶಗಳಲ್ಲಿ ಕಾಫಿ ಮತ್ತು ಟೀ ತೋಟಗಳಿವೆ. ನದಿ ತಿರುವಿನಿಂದ ಜಲಾಶಯಗಳಲ್ಲಿ ಸಂಗ್ರಹವಾಗುವ ನೀರಿನಿಂದ ಪರಿಸರ ವ್ಯವಸ್ಥೆ ಮೇಲೆ ಧಕ್ಕೆ ಇಲ್ಲ.
ನೀರು ಪಂಪ್ ಮಾಡುವ ಬದಲು ಸುರಂಗ ಮೂಲಕ ಹಾಯಿಸುವ ಸಾಧ್ಯತೆ ಬಗ್ಗೆ ಯೋಚಿಸಬೇಕು ಇದರಿಂದ ದೀರ್ಘಕಾಲೀನ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಬಹುದು ಎಂದು ಸಮಿತಿ ಸಲಹೆ ನೀಡಿದೆ.
ಯೋಜನೆ ಆರಂಭಿಸುವ ಮುನ್ನ ಅರಣ್ಯ ಸಂರಕ್ಷಣೆ ಕಾಯ್ದೆ ಪ್ರಕಾರ ಅನುಮತಿ ಪಡೆದಿಲ್ಲ ಹಾಗೂ ಅದರಿಂದಾಗಿ ಚೆನ್ನೈನಲ್ಲಿರುವ ಹಸಿರು ನ್ಯಾಯಮಂಡಳಿ ಯೋಜನೆಗೆ ತಡೆಯಾಜ್ಞೆ ನೀಡಿರುವುದನ್ನೂ ಸಮಿತಿ ಗಮನಿಸಿದೆ.