ಲಖನೌ (ಪಿಟಿಐ): ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ಡಿಎಸ್ಪಿ ಆಗಿದ್ದ ತಂಜಿಲ್ ಅಹಮದ್ (45) ಅವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಉತ್ತರ ಪ್ರದೇಶದ ವಿಶೇಷ ಕಾರ್ಯಾಚರಣೆ ಪಡೆ (ಎಸ್ಟಿಎಫ್) ಪ್ರಮುಖ ಆರೋಪಿಯನ್ನು ಬಂಧಿಸಿದೆ.
ಮುನೀರ್ ಬಂಧಿತ ಆರೋಪಿ. ಆತನನ್ನು ನೋಯಿಡಾದಲ್ಲಿ ಬಂಧಿಸಲಾಗಿದೆ ಎಂದು ಎಸ್ಟಿಎಫ್ ಅಧಿಕಾರಿಗಳು ಹೇಳಿದ್ದಾರೆ.
ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ಏಪ್ರಿಲ್ 2ರ ಮಧ್ಯರಾತ್ರಿ ತಂಜಿಲ್ ಅವರು ಮದುವೆ ಮುಗಿಸಿಕೊಂಡು ಕುಟುಂಬ ಸದಸ್ಯರೊಂದಿಗೆ ಮನೆಗೆ ಮರಳುತ್ತಿದ್ದರು. ಈ ವೇಳೆ ಬೈಕ್ನಲ್ಲಿ ಬಂದಿದ್ದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ತಂಜಿಲ್ ಅವರನ್ನು ಹತ್ಯೆ ಮಾಡಿದ್ದರು.
ಘಟನೆಯಲ್ಲಿ ತಂಜಿಲ್ ಅವರಿಗೆ 24 ಗುಂಡುಗಳು ಹೊಕ್ಕಿದ್ದವು. ಅವರ ಪತ್ನಿ ಫರ್ಜಾನಾ ಅವರಿಗೆ ನಾಲ್ಕು ಗುಂಡು ತಗುಲಿದ್ದವು. ಅದೇ ಕಾರಿನ ಹಿಂಬದಿ ಸೀಟಿನಲ್ಲಿದ್ದ ಅವರ 14 ವರ್ಷ ಮಗಳು ಹಾಗೂ 12 ವರ್ಷದ ಮಗ ಪ್ರಾಣಾಪಾಯದಿಂದ ಪಾರಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ರಿಜ್ವಾನ್, ತಂಜೀಮ್, ರೇಹಾನ್ ಮತ್ತು ಜೈನುಲ್ ಎಂಬುವವರನ್ನು ಪೊಲೀಸರು ಬಂಧಿಸಿದ್ದರು.