ನವದೆಹಲಿ (ಪಿಟಿಐ): ಎನ್ಡಿಎ ಮೈತ್ರಿ ಕೂಟದ 29 ಮಿತ್ರಪಕ್ಷಗಳ ಸದಸ್ಯರು ಮಂಗಳವಾರ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಎನ್ಡಿಎ ನಾಯಕನನ್ನಾಗಿ ಆಯ್ಕೆ ಮಾಡಿದರು.
ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಸದಸ್ಯರ ಜತೆಗೂಡಿ ಎನ್ಡಿಎ ಮೈತ್ರಿಕೂಟದ ಸದಸ್ಯರು ಮೋದಿ ಅವರನ್ನು ಮೈತ್ರಿಕೂಟದ ನಾಯಕನಾಗಿ ಆಯ್ಕೆ ಮಾಡಿದರು.
ಆಯ್ಕೆ ನಂತರ ಮಾತನಾಡಿದ ಮೋದಿ ಅವರು `ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿದರೂ ಕೂಡ ಎನ್ಡಿಎಗೆ ಮಿತ್ರಪಕ್ಷಗಳ ಸಹಕಾರ ತುಂಬಾ ಮಹತ್ವದಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಭಾಗವಹಿಸಿದ್ದ ಟಿಡಿಪಿ, ಅಕಾಲಿ ದಳ, ಶಿವ ಸೇನಾ, ಎಲ್ಜೆಪಿ ಮತ್ತು ನಾಗಾಲ್ಯಾಂಡ್ ಪೀಫಲ್ಸ್ ಫ್ರಂಟ್ ಸದಸ್ಯರು ಮೋದಿ ನಾಯಕತ್ವಕ್ಕೆ ಸಹಮತ ಸೂಚಿಸಿದರು. ಸಭೆಗೆ ಹರಿಯಾಣಾ ಜನಹಿತ ಪಕ್ಷದ ಮುಖ್ಯಸ್ಥ ಕುಲದೀಪ್ ಸಿಂಗ್ ಬಿಸ್ಣೋಯಿ ಅವರ ಹಾಜರಾಗಿರಲಿಲ್ಲ.
ಸಭೆಯಲ್ಲಿ ಮಾತನಾಡಿದ ಟಿಡಿಪಿ ಮುಖ್ಯಸ್ಥ ಮತ್ತು ಎನ್ಡಿಎ ಮಾಜಿ ಸಂಚಾಲಕ ಚಂದ್ರಬಾಬು ನಾಯ್ಡು ಅವರು `ಮೋದಿ ಅವರ ನಾಯಕತ್ವದಲ್ಲಿ ಭಾರತವು ಅಮೆರಿಕ ಮತ್ತು ಚೀನಾಗೆ `ನಿಜವಾದ ಸವಾಲು' ಒಡ್ಡುವ ಮೂಲಕ ಜಾಗತೀಕ ಶಕ್ತಿಗಳ ಸಾಲಿನಲ್ಲಿ ಸ್ಥಾನ ಪಡೆಯಲಿದೆ' ಎಂದು ಬಣ್ಣಿಸಿದರು.
ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮಾತನಾಡಿ `ಕಳೆದ 25 ವರ್ಷಗಳಿಂದಲೂ ಬಿಜೆಪಿ ನೇತೃತ್ವದ ಮೈತ್ರಿಕೂಟವು ಹೋರಾಟ ನಡೆಸುತ್ತಲೇ ಬಂದಿದೆ. ಇದೀಗ `ಉತ್ತಮ ದಿನಗಳು ಪ್ರಾರಂಭವಾಗಿವೆ'' ಎಂದು ಹೇಳಿದರು.
ಎಲ್ಜೆಪಿ ಮುಖಂಡ ರಾಮ್ ವಿಲಾಸ್ ಪಾಸ್ವಾನ್ ಮಾತನಾಡಿ `ಮೋದಿ ಅವರನ್ನು ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಿದ ಮಾತ್ರದಿಂದಲೇ ಎನ್ಡಿಎಗೆ ಈ `ಚಮತ್ಕಾರ' ಮಾಡಲು ಸಾಧ್ಯವಾಯಿತು' ಎಂದರು.
'ಜವಾಬ್ದಾರಿ ಎನ್ನುವುದು `ಹೂವುಗಳ ಮಾಲೆಯಲ್ಲ, ಅದು ಮುಳ್ಳಿನ ಕಿರಿಟವಿದ್ದಂತೆ' ಆದ್ದರಿಂದ, ಭರವಸೆಗಳನ್ನು ನಿಗದಿತ ಕಾಲಮಿತಯೊಳಗೆ ಈಡೇರಿಸಲು ಆದ್ಯತೆ ನೀಡಬೇಕು' ಎಂದು ಪಾಸ್ವಾನ್ ಹೇಳಿದರು.