ಮುಂಬೈ (ಪಿಟಿಐ/ಐಎಎನ್ಎಸ್): ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿರುವ ಬಿಜೆಪಿ, ತನ್ನ ಬಹುಕಾಲದ ಮಿತ್ರ ಶಿವಸೇನಾವನ್ನು ದೂರ ಇಟ್ಟು ಎನ್ಸಿಪಿ ಬೆಂಬಲದೊಂದಿಗೆ ಸರ್ಕಾರ ರಚಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.
ಈ ನಡುವೆ, ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ನಿವಾಸಕ್ಕೆ ಸೋಮವಾರ ಭೇಟಿ ನೀಡಿ ಸಮಾಲೋಚನೆ ನಡೆಸಿದರು.ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಮುಂದಿನ ಕಾರ್ಯತಂತ್ರ ರೂಪಿಸುವ ಬಗ್ಗೆ ಸುಮಾರು ೪೫ ನಿಮಿಷಗಳ ಕಾಲ ಇಬ್ಬರು ನಾಯಕರು ಚರ್ಚಿಸಿದರು.
ಬಿಜೆಪಿ ದ್ವಂದ್ವ: ೨೫ ವರ್ಷಗಳ ಹಳೆಯ ಮಿತ್ರ ಶಿವಸೇನಾವನ್ನು ಸಂಪೂರ್ಣವಾಗಿ ದೂರಮಾಡಬೇಕೇ ಅಥವಾ ಎನ್ಸಿಪಿ ಬೆಂಬಲ ಪಡೆಯಬೇಕೆ ಎಂಬ ದ್ವಂದ್ವ ಬಿಜೆಪಿ ಮುಖಂಡರನ್ನು ಕಾಡುತ್ತಿದೆ. ಚುನಾವಣೆ ಪೂರ್ವದಲ್ಲಿ ಒಣಪ್ರತಿಷ್ಠೆಯಿಂದಾಗಿ ಬಿಜೆಪಿ–ಸೇನಾ ಮೈತ್ರಿ ಕಡಿದುಕೊಂಡಿದ್ದವು. ಚುನಾವಣೆಯ ನಂತರವೂ ಇದು ಮುಂದುವರಿಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಎನ್ಸಿಪಿ ಬೆಂಬಲಕ್ಕೆ ಬಿಜೆಪಿ ಸಮ್ಮತಿ ಸೂಚಿಸಿದ್ದು, ಮಂಗಳವಾರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಿದ ಬಳಿಕ ಸರ್ಕಾರ ರಚಿಸುವ ಹಕ್ಕು ಮಂಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಗಾದಿಗೆ ದೇವೇಂದ್ರ ಫಡ್ನವಿಸ್ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.
ಸರ್ಕಾರ ರಚನೆಗೆ ಮುನ್ನ ಬಹುಮತ ಸಾಬೀತುಪಡಿಸುವ ಅಗತ್ಯವಿಲ್ಲ ಎನ್ನುವುದು ಪಕ್ಷದ ಅನಿಸಿಕೆಯಾಗಿದೆ. ‘ನಾವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದೇವೆ. ಆದ್ದರಿಂದ ಸರ್ಕಾರ ರಚಿಸುವುದಾಗಿ ರಾಜ್ಯಪಾಲರ ಬಳಿ ಹಕ್ಕು ಮಂಡಿಸುವುದಕ್ಕೆ ಸಂಪೂರ್ಣ ಬಹುಮತದ ಅಗತ್ಯವಿಲ್ಲ’ ಎಂದು ಮಹಾರಾಷ್ಟ್ರದ ಬಿಜೆಪಿ ಉಸ್ತುವಾರಿ ರಾಜೀವ್ ಪ್ರತಾಪ್ ರೂಡಿ ಹೇಳಿದ್ದಾರೆ.
ಠಾಕ್ರೆ ಭೇಟಿ: ಹೊಸದಾಗಿ ಆಯ್ಕೆ ಆಗಿರುವ ಸೇನಾ ಶಾಸಕರು ಉದ್ಧವ್ ಠಾಕ್ರೆ ಅವರನ್ನು ಸೋಮವಾರ ಭೇಟಿ ಮಾಡಿದರು. ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ವಿಷಯವಾಗಿ ಸಮಾಲೋಚನೆ ನಡೆಯಿತು. ಆದರೆ, ಬಿಜೆಪಿ ಜತೆ ಮರುಮೈತ್ರಿ ಕುರಿತು ಚರ್ಚೆ ನಡೆಯಲಿಲ್ಲ.