ಕಾರ್ಕಳ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ರೈತರಲ್ಲಿ ಚೈತನ್ಯ ತುಂಬುವ ಕೆಲಸ ನಡೆಸಬೇಕು ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ತಿಳಿಸಿದರು. ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ನೂತನ ಕಾಮಗಾರಿಗಳನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ದೇಶದಲ್ಲಿ ಶೇ.೬೦ರಷ್ಟು ಜನ ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿದ್ದಾರೆ. ಅವರಲ್ಲಿ ಶೇ. ೪೦ರಷ್ಟು ಮಂದಿ ಆರ್ಥಿಕ ಅವಕಾಶಕ್ಕಾಗಿ ನಗರಕ್ಕೆ ಉದ್ಯೋಗವನ್ನು ಹುಡುಕಿ ವಲಸೆ ಹೋಗುತ್ತಿದ್ದಾರೆ. ಮೂಲ ಕೃಷಿಯನ್ನೇ ಜೀವನಾಧಾರವಾಗಿ ತೊಡಗಿಸಿಕೊಂಡ ಗ್ರಾಮೀಣ ಜನರು ಕೃಷಿಯಿಂದ ಹಿಂದೆ ಸರಿಯುತ್ತಿದ್ದಾರೆ.
ಇದಕ್ಕೆ ಸಾಕಷ್ಟು ಕಾರಣಗಳಿವೆ. ತಮ್ಮ ಭೂಮಿಯಲ್ಲಿ ಕೃಷಿ ಉತ್ಪನ್ನಗಳನ್ನು ಉತ್ಪಾದಿಸಿದ ರೈತನಿಗೆ ಅದು ತಲುಪಬೇಕಾದ ಕೊನೆಯ ವ್ಯಕ್ತಿಗೆ ತಲುಪಿಸುವಲ್ಲಿ ಸಾಧ್ಯವಾಗದ ಪರಿಸ್ಥಿತಿ ಇಂದು ಮುಂದುವರೆಯುತ್ತಿದೆ. ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಹಾಗೂ ದಾಸ್ತಾನಿಗೆ ಗೋದಾಮನ್ನು ಒದಗಿಸುವ ಜೊತೆಗೆ ರೈತೋಪಯೋಗಿ ಯೋಜನೆಗಳನ್ನು ಎಪಿಎಂಸಿಯಿಂದ ನಡೆಸಬೇಕು ಎಂದರು.
ಶಾಸಕ ವಿ.ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾಲಕಾಲಕ್ಕೆ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುವುದು ಅಗತ್ಯ ಎಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸವಿತಾ ಶಿವಾನಂದ ಕೋಟ್ಯಾನ್ ಹಾಗೂ ಪುರಸಭಾಧ್ಯಕ್ಷೆ ರೆಹಮತ್ ಎನ್.ಶೇಖ್ ಮಾತನಾಡಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಾಧನೆಗಳನ್ನು ಶ್ಲಾಘಿಸಿದರು.ಈ ಸಂದರ್ಭದಲ್ಲಿ ವಯೋನಿವೃತ್ತಿ ಹೊಂದಿದ ಸಂಸ್ಥೆಯ ಕಾರ್ಯದರ್ಶಿ ಎಚ್.ಪಾಂಡು ಶೆಟ್ಟಿ ಅವರನ್ನು ಅಭಿನಂದಿಸಿ ವಿದಾಯ ಕೋರಲಾಯಿತು.
ತಾಲ್ಲೂಕು ಪಂಚಾಯಿತಿಯ ಮಾಜಿ ಅಧ್ಯಕ್ಷೆ ರಶ್ಮಿ ಶೆಟ್ಟಿ, ಸುಂದರ ಗೌಡ, ಸದಸ್ಯರಾದ ಆನಂದ ಬಂಡೀಮಠ, ರಘುಚಂದ್ರ ಜೈನ್, ಅಂತೋನಿ ಡಿಸೋಜ, ಗಣೇಶ ನಾಯ್ಕ, ಉದಯ ಸಾಲ್ಯಾನ್, ಬಾಲಕೃಷ್ಣ ಹೆಗ್ಡೆ, ಕ್ಸೇವಿಯರ್ ಡಿಮೆಲ್ಲೋ, ಎಂ.ರಘುಪತಿ ಪೈ, ಅಪ್ಪಿ ಶೆಡ್ತಿ, ಕಾರ್ಯದರ್ಶಿ ಎಚ್.ಪಾಂಡು ಶೆಟ್ಟಿ ಮತ್ತಿತರರು ಇದ್ದರು. ಪ್ರದೀಪ್ ಕೋಟ್ಯಾನ್ ಸ್ವಾಗತಿಸಿದರು. ನಾಗೇಶ್ ಬಜಗೋಳಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಧರ್ ವಂದಿಸಿದರು.