ಬೆಂಗಳೂರು: ‘ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ (ಎಫ್ಡಿಐ)ದಲ್ಲಿ ಹೆಚ್ಚಳ ಮತ್ತು ಸಾಮಾನ್ಯ ವಿಮಾ ಕ್ಷೇತ್ರದ ಸಂಸ್ಥೆಗಳನ್ನು ಖಾಸಗೀಕರಣಕ್ಕೆ ಅವಕಾಶ ನೀಡಬಾರದು’ ಎಂದು ಬೆಂಗಳೂರು ಪ್ರಾದೇಶಿಕ ಸಾಮಾನ್ಯ ವಿಮಾ ನೌಕರರ ಸಂಘವು ಒತ್ತಾಯಿಸಿದೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎ.ಪ್ರೇಮ್ ಕುಮಾರ್ ಅವರು, ‘ವಿಮಾ ಕ್ಷೇತ್ರದಲ್ಲಿ ಈಗಾಗಲೇ ಶೇ 26ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ಇದೆ. ಇದನ್ನು ಶೇ 49ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ವಿಮಾ ಕ್ಷೇತ್ರ ಖಾಸಗೀಕರಣಗೊಳಿಸಿ 13 ವರ್ಷ ಕಳೆದಿದ್ದರೂ ಯಾವುದೇ ದೊಡ್ಡ ಸಾಧನೆ ಕಂಡುಬಂದಿಲ್ಲ’ ಎಂದರು.
‘ವಿಮಾ ಕ್ಷೇತ್ರಕ್ಕೆ ದೊಡ್ಡ ಪ್ರಮಾಣದಲ್ಲಿ ಹಣ ಹೂಡಲು ಬರಲಿರುವ ವಿದೇಶಿ ಕಂಪೆನಿಗಳು ಸ್ವಂತ ಲಾಭಕ್ಕಾಗಿ ಇಲ್ಲಿಗೆ ಬರುತ್ತವೆಯೇ ಹೊರತು, ನಮ್ಮ ದೇಶದ ಏಳಿಗೆಗೆ ನೆರವು ನೀಡುವುದಕ್ಕಾಗಿ ಅಲ್ಲ. ‘ಮುಂಬರುವ ಸಂಸತ್ನ ಚಳಿಗಾಲದ ಅಧಿವೇಶನದಲ್ಲಿ ಜೀವವಿಮೆಗೆ ವಿದೇಶಿ ಬಂಡವಾಳ ಹೂಡಿಕೆಗೆ ಅನುಮತಿ ನೀಡಿದರೆ ಮರುದಿನವೇ ಮುಷ್ಕರ ನಡೆಸುತ್ತೇವೆ’ ಎಂದು ಎಚ್ಚರಿಸಿದರು.