ಕಿಷ್ತ್ವಾರ್ (ಜಮ್ಮು ಮತ್ತು ಕಾಶ್ಮೀರ) (ಪಿಟಿಐ): ಜಮ್ಮು ಮತ್ತು ಕಾಶ್ಮೀರದಲ್ಲಿ ವಂಶ ಪಾರಂಪರ್ಯ ಆಡಳಿತ ನಡೆಸಿದ ಎರಡು ಕುಟುಂಬಗಳು ಇಡೀ ರಾಜ್ಯವನ್ನು ಲೂಟಿ ಮಾಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಶನಿವಾರ ತಮ್ಮ ಮೊದಲ ಚುನಾವಣಾ ಪ್ರಚಾರ ರ್್ಯಾಲಿಯಲ್ಲಿ ಮಾತನಾಡಿದ ಅವರು, ನ್ಯಾಷನಲ್ ಕಾನ್ಫ್ರೆನ್ಸ್ ಪಕ್ಷದ ಫಾರೂಕ್ ಅಬ್ದುಲ್ಲಾ ಮತ್ತು ಪಿಡಿಪಿಯ ಮುಫ್ತಿ ಮಹಮ್ಮದ್ ಸೈಯದ್ ಕುಟುಂಬಗಳ ಮೇಲೆ ಪರೋಕ್ಷ ವಾಗ್ದಾಳಿ ನಡೆಸಿದರು.
ಈ ಚುನಾವಣೆಯಲ್ಲಾದರೂ ಈ ಎರಡೂ ಕುಟುಂಬಗಳಿಗೆ ಸರಿಯಾದ ಶಿಕ್ಷೆ ನೀಡದಿದ್ದರೆ ಮತ್ತದೇ ಕುಟುಂಬಗಳು ಅಧಿಕಾರಕ್ಕೆ ಬರುತ್ತವೆ ಎಂದು ಮೋದಿ ಅವರು ಎಚ್ಚರಿಸಿದರು.
‘ಈ ಎರಡು ಕುಟುಂಬಗಳು ಪರಸ್ಪರ ಹೊಂದಾಣಿಕೆ ಮಾಡಿಕೊಂಡಿವೆ. ಒಂದು ಕುಟುಂಬ ಐದು ವರ್ಷ ರಾಜ್ಯವನ್ನು ಕೊಳ್ಳೆ ಹೊಡೆದ ನಂತರ ಮತ್ತೊಂದು ಕುಟುಂಬಕ್ಕೆ ಅವಕಾಶ ನೀಡುತ್ತದೆ. ಈ ಗುತ್ತಿಗೆ ಪದ್ಧತಿಯನ್ನು ಈ ಬಾರಿಯಾದರೂ ರದ್ದು ಮಾಡಿ’ ಎಂದು ಮತದಾರರಲ್ಲಿ ಮನವಿ ಮಾಡಿದರು.
ಕಳೆದ ಹತ್ತು ವರ್ಷಗಳಲ್ಲಿ ಕಾಶ್ಮೀರ ಮತ್ತು ಕಾಶ್ಮೀರಿಗಳ ಸ್ಥಿತಿ ಚಿಂತಾಜನಕವಾಗಿದೆ. ರಾಜಕೀಯದೊಂದಿಗೆ ಪ್ರಾದೇಶಿಕತೆಯನ್ನು ತಳಕು ಹಾಕುವ ಯತ್ನಗಳ ನಡೆಯುತ್ತಿದ್ದು ಆ ಬಗ್ಗೆ ಕಾಶ್ಮೀರಿಗಳು ಎಚ್ಚರದಿಂದ ಇರಬೇಕು ಎಂದು ಮೋದಿ ಅವರು ಸಲಹೆ ಮಾಡಿದರು.
ಜಮ್ಮು ಮತ್ತು ಕಾಶ್ಮೀರದ ಯುವ ಜನತೆಯಲ್ಲಿ ವಿಶ್ವಾಸ ಮೂಡಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ‘ಪ್ರಜಾತಂತ್ರ, ಮಾನವೀಯತೆ ಹಾಗೂ ಕಾಶ್ಮೀರದ ವಿಶಿಷ್ಟತೆೆ’ಯನ್ನು ಮರುಸ್ಥಾಪಿಸುವ ಕನಸನ್ನು ನನಸಾಗಿಸುವುದಾಗಿ ಮೋದಿ ಭರವಸೆ ನೀಡಿದರು.
ಜನ ಮೂರ್ಖರಲ್ಲ
ರಾಜ್ಯವನ್ನು ನಾವು ಕೊಳ್ಳೆ ಹೊಡೆದಿದ್ದರೆ ಪದೇ ಪದೇ ನಮ್ಮನ್ನು ಆಯ್ಕೆ ಮಾಡಲು ಜನ ಮೂರ್ಖರಲ್ಲ. ನಾವು ಜನರ ಪ್ರೀತಿ, ವಿಶ್ವಾಸ ಗೆದ್ದಿದ್ದೇವೆ. ಆದ್ದರಿಂದಲೇ ಅವರು ನಮ್ಮನ್ನು ಆಯ್ಕೆ ಮಾಡುತ್ತಿದ್ದಾರೆ. ಆ ಭಯ ಮೋದಿ ಅವರನ್ನು ಕಾಡುತ್ತಿದೆ.
- ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ