ಚೆನ್ನೈ: ಬೆಂಗಳೂರು– ಗುವಾಹಟಿ ರೈಲಿನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತರಾದ ಸ್ವಾತಿ ಅವರ ಮದುವೆ ಇನ್ನೆರಡು ತಿಂಗಳಲ್ಲಿ ನಡೆಯುವುದರಲ್ಲಿತ್ತು.
ಹೈದರಾಬಾದ್ನಲ್ಲಿ ಎಂಜಿನಿಯರಿಂಗ್ ಓದು ಮುಗಿಸಿದ್ದ ಗುಂಟೂರು ಮೂಲದ ಅವರು ಬೆಂಗಳೂರಿನ ಟಿಸಿಎಸ್ ಕಂಪೆನಿಯಲ್ಲಿ ನಾಲ್ಕು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದರು.
ಕಾರ್ಮಿಕ ದಿನಾಚರಣೆ ಅಂಗವಾಗಿ ಗುರುವಾರ ರಜೆ ಇತ್ತು. ಪ್ರತಿ ಶನಿವಾರ ಮತ್ತು ಭಾನುವಾರ ಎಂದಿನಂತೆ ರಜೆ ಇದ್ದೇ ಇರುತ್ತದೆ. ಹೀಗಾಗಿ ಮಧ್ಯೆ ಶುಕ್ರವಾರ ಒಂದು ದಿನ ರಜೆ, ನಾಲ್ಕು ದಿನ ಊರಿಗೆ ಹೋಗಿ ಬರೋಣವೆಂದು ಸ್ನೇಹಿತರೊಬ್ಬರ ಜತೆ ಊರಿಗೆ ಹೊರಟಿದ್ದರು.
ಸ್ವಾತಿ ಅವರ ನಿಧನದಿಂದ ಪೋಷಕರು ಹಾಗೂ ನೆಂಟರಿಷ್ಟರಿಗೆ ತೀವ್ರ ಆಘಾತವಾಗಿದೆ. ‘ಅವಳು ಇವತ್ತು ನಲಿಯುತ್ತಾ ಬರಬೇಕಿತ್ತು. ಆದರೆ ಈಗ ಅವಳು ಶವವಾಗಿ ಬರುತ್ತಿದ್ದಾಳೆ. ಇನ್ನೆರಡು ತಿಂಗಳಲ್ಲಿ ಅವಳ ಮದುವೆ ನಡೆಯುವುದರಲ್ಲಿತ್ತು’ ಎಂದು ಯುವತಿಯ ಅಜ್ಜಿ ರಾಜಲಕ್ಷ್ಮಿ ಕಣ್ಣೀರಿಟ್ಟರು.