ಅನೇಕ ಸಂತರು, ಮಹನೀಯರ ಜಯಂತಿಗಳಿಗೆ ಸರ್ಕಾರ ಸಾಕಷ್ಟು ರಜೆಗಳನ್ನು ಘೋಷಿಸಿದೆ. ಇಂಥ ಜಯಂತಿಗಳ ಬೇಡಿಕೆ ಆಂಜನೇಯನ ಬಾಲದಂತೆ ಬೆಳೆಯುತ್ತಲೇ ಇರುವುದು ಒಳ್ಳೆಯ ಲಕ್ಷಣವಲ್ಲ.
ರಷ್ಯಾ ಸೇರಿದಂತೆ ಹಲವು ಮುಂದುವರಿದ ರಾಷ್ಟ್ರಗಳು ಮಹಾನ್ ವ್ಯಕ್ತಿಗಳ ದಿನಾಚರಣೆಯನ್ನು ಆಚರಿಸುತ್ತವೆ. ಆದರೆ ಆ ಕಾರ್ಯ, ದೈನಂದಿನ ಕೆಲಸದ ವೇಳೆಯಲ್ಲೇ ನಡೆಯುತ್ತದೆ. ನಿಗದಿತ ಅವಧಿಯಲ್ಲಿ ಏಕಕಾಲಕ್ಕೆ ರಾಷ್ಟ್ರದಾದ್ಯಂತ ಐದು ನಿಮಿಷ ಗೌರವ ಸಲ್ಲಿಸಿ ನಂತರ ಕೆಲಸದಲ್ಲಿ ಮಗ್ನರಾಗುತ್ತಾರೆ. ಅದೇ ರೀತಿ, ಭಾರತದಲ್ಲಿ ಮಹಾತ್ಮ ಗಾಂಧಿ ಅವರ ಹುತಾತ್ಮ ದಿನವಾದ ಜನವರಿ 30ರಂದು ಮೌನಾಚರಣೆ ಮಾಡಲಾಗುತ್ತದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಮ್ಮತದಿಂದ ‘ಸ್ವಾತಂತ್ರ್ಯ ದಿನಾಚರಣೆ’ ಮತ್ತು ‘ಗಣರಾಜ್ಯೋತ್ಸವ’ವನ್ನು ಮಾತ್ರ ಸರ್ಕಾರಿ ರಜೆಗಳೆಂದು ಘೋಷಿಸಬೇಕು. ಮಿಕ್ಕಂತೆ ಸಂತರು, ಮಹನೀಯರ ಜಯಂತಿಗಳಂದು ಸರ್ಕಾರಿ ಕೆಲಸದ ವೇಳೆಯಲ್ಲಿ ಒಂದು ಅವಧಿ ನಿಗದಿಪಡಿಸಿ ಆಚರಿಸುವುದು ಸೂಕ್ತ.