ಪಡಿತರ ಅಂಗಡಿಗೆ ಬರುವ ಅಕ್ಕಿ, ಗೋಧಿ, ಸಕ್ಕರೆ ಅಥವಾ ಸೀಮೆ ಎಣ್ಣೆ ಪಡೆಯಲು ಬಡವರು ಉದ್ದನೆಯ ಸಾಲಿನಲ್ಲಿ ನಿಲ್ಲಬೇಕು. ಆ ಪಡಿಪಾಟಲು ಅನುಭವಿಸಿದವರಿಗೇ ಗೊತ್ತು. ಮನೆಯಲ್ಲಿ ಅನ್ನ ಬೇಯಬೇಕೆಂದರೆ, ಹೀಗೆ ಅಸಹಾಯಕರಾಗಿ ನಿಲ್ಲುವ ಅನಿವಾರ್ಯ ಅವರದು. ‘ಬಿಡಿ... ಕಡುಬಡವರ ಪಾಲಿಗೆ ಬಂದಿದ್ದು ಅದೇ. ಅವರಿಗೆ ಪಂಚಾಮೃತವೂ ಅದೇ ಅಲ್ಲವೇ? ನಮ್ಮ ಕೋಟ್ಯಧಿಪತಿಗಳು ಹೀಗೆ ನಿಲ್ಲುವರಾ?’ ಎಂದು ನಿಟ್ಟುಸಿರು ಬಿಟ್ಟಿರಾ?
ನಿಜ! ಅಂಥ ಸ್ಥಿತಿಯನ್ನು ತಂದಿದ್ದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ. ಭಾರತಕ್ಕೆ ಬಂದಿದ್ದ ಅವರನ್ನು ಭೇಟಿಯಾಗಲು (ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಬರೀ ಕೈ ಕುಲುಕಲು) ಸಾವಿರಾರು ಕೋಟಿ ರೂಪಾಯಿಗಳ ನಮ್ಮ ಒಡೆಯರು ಹೀಗೆ ಸಾಲಿನಲ್ಲಿ ನಿಂತಿರುವುದನ್ನು (ಪ್ರ.ವಾ. ಜ.27ರ ಪುಟ 9) ನೋಡಿದಾಗ, ‘ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು’ ಎಂಬ ವಾಕ್ಯಕ್ಕೆ ಹೊಸದೊಂದು ಅರ್ಥ ಹೊಳೆದಂತಾಯಿತು.