ಬೆಂಗಳೂರು: ಎಲ್ಕೆಜಿ ವಿದ್ಯಾರ್ಥಿನಿಯ ಶುಲ್ಕ ಮರುಪಾವತಿ ಮಾಡುವಂತೆ ಇಂದಿರಾನಗರದ ನ್ಯೂ ಹೊರೈಜಾನ್ ಪಬ್ಲಿಕ್ ಶಾಲೆಗೆ ಬೆಂಗಳೂರು ನಗರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶ ನೀಡಿದೆ.
ಈ ಸಂಬಂಧ ಇಂದಿರಾನಗರದ ನಿವಾಸಿ ಸೂರ್ಯನಾರಾಯಣನ್ ನಾಗರಾಜನ್ ವೇದಿಕೆಗೆ ದೂರು ಸಲ್ಲಿಸಿದ್ದರು. ₨98,975 ಶುಲ್ಕ ಹಾಗೂ ₨2 ಸಾವಿರ ಕೋರ್ಟ್ ವೆಚ್ಚವನ್ನು ಒಂದು ತಿಂಗಳೊಳಗೆ ಸೂರ್ಯನಾರಾಯಣನ್ ಅವರಿಗೆ ಪಾವತಿಸಬೇಕು ಎಂದು ನವೆಂಬರ್ 20ರಂದು ಆದೇಶ ಹೊರಡಿಸಿದೆ.
ಸೂರ್ಯನಾರಾಯಣನ್ ಅವರು ಜನವರಿ ತಿಂಗಳಿನಲ್ಲಿ ಪುತ್ರಿ ಅದಿತಿಯನ್ನು ನ್ಯೂ ಹೊರೈಜಾನ್ ಶಾಲೆಯಲ್ಲಿ ಎಲ್ಕೆಜಿಗೆ ಸೇರಿಸಿದ್ದರು. ಜನವರಿ 10ರಂದು ₨98,975 ಶುಲ್ಕ ಕಟ್ಟಿದ್ದರು. ಜೂನ್ ತಿಂಗಳಿನಲ್ಲಿ ತರಗತಿಗಳು ಆರಂಭವಾಗಬೇಕಿತ್ತು. ಈ ನಡುವೆ, ಮಾರ್ಚ್ ತಿಂಗಳಿನಲ್ಲಿ ಸೂರ್ಯನಾರಾಯಣನ್ ಪುತ್ರಿಗೆ ಎಚ್ಎಸ್ಆರ್ ಬಡಾವಣೆಯ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಪ್ರವೇಶ ದೊರಕಿತ್ತು.
ಶುಲ್ಕ ಮರುಪಾವತಿ ಮಾಡುವಂತೆ ನ್ಯೂ ಹೊರೈಜಾನ್ ಶಾಲಾ ಆಡಳಿತ ಮಂಡಳಿ ಬಳಿ ಕೋರಿಕೊಂಡಿದ್ದರು. ಆದರೆ, ಆಡಳಿತ ಮಂಡಳಿ ಶುಲ್ಕ ಮರುಪಾವತಿ ಮಾಡಲು ನಿರಾಕರಿಸಿತ್ತು. ಈ ಕಾರಣದಿಂದ ಅವರು ವೇದಿಕೆಯ ಮೊರೆ ಹೋಗಿದ್ದರು.