ಬೆಂಗಳೂರಿಗೆ ಸ್ಮಾರ್ಟ್ ಸಿಟಿಯಾಗುವ ಭಾಗ್ಯ ದೊರೆಯಲಿಲ್ಲವೆಂದು ವ್ಯಕ್ತಿಗಳ ನಡುವೆ ಮತ್ತು ಪಕ್ಷಗಳ ನಡುವೆ ವಾದ ವಿವಾದಗಳು ನಡೆಯುತ್ತಿವೆ. ಬೆಂಗಳೂರಿನ ನನ್ನಂತಹ ಅಜ್ಞ ಪ್ರಜೆಯನ್ನು ಕಾಡುವ ಒಂದು ಪ್ರಶ್ನೆಯನ್ನು ಎಲ್ಲರ ಮುಂದೆ ಇಡುತ್ತಿದ್ದೇನೆ.
ಸುಮಾರು 75–80 ವರ್ಷಗಳ ಕೆಳಗೆ ಮೈಸೂರು ಸಂಸ್ಥಾನದಲ್ಲಿ ಸ್ಮಾರ್ಟ್ ಸಿಟಿ ಆಗಲೆ ವಾಸ್ತವವಾಗಿತ್ತು. ಬೆಂಗಳೂರು ಅಂಥ ಸಿಟಿಯಾಗಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಮಿರ್ಜಾ ಇಸ್ಮಾಯಿಲ್ ಅವರು ಆಗಾಗ ಬೆಂಗಳೂರಿನ ವಿವಿಧ ಭಾಗಗಳಿಗೆ ಅಧಿಕಾರಿಗಳಿಗೆ ಮೊದಲೇ ತಿಳಿಸದೆ ಭೇಟಿ ಕೊಡುತ್ತಿದ್ದರು.
ಬೆಂಗಳೂರಿನಲ್ಲಿ ನೀರು ಮತ್ತು ವಿದ್ಯುಚ್ಛಕ್ತಿ ಸದಾ ಇರುತ್ತಿದ್ದವು. ರಸ್ತೆಗಳು ಸ್ವಚ್ಛವಾಗಿರುತ್ತಿದ್ದವು. ಬಾಲಕನಾಗಿದ್ದ ನಾನು ಎಲ್ಲವನ್ನೂ ಕಣ್ಣಾರ ಕಂಡಿದ್ದೇನೆ. ಈಗಿನ ಸಮಸ್ಯೆಗಳ ಪ್ರಮಾಣ ಅಗಾಧವಾಗಿದೆ ಎಂದು ಒಪ್ಪೋಣ.
ಆದರೆ ಆಗಿನ ಸರ್ಕಾರಕ್ಕೆ, ಪುರಸಭೆಗೆ ಇಂದಿನ ಆದಾಯವಾಗಲಿ, ತಂತ್ರಜ್ಞಾನದ ನೆರವಾಗಲಿ ಇರಲಿಲ್ಲ. ಕೇಂದ್ರ ಸರ್ಕಾರವನ್ನು ಅವಲಂಬಿಸದೆ ಇಲ್ಲಿನ ಸರ್ಕಾರ ಮತ್ತು ಜನರೇ ಬೆಂಗಳೂರನ್ನು ಸ್ಮಾರ್ಟ್ ಸಿಟಿಯನ್ನಾಗಿ ಮಾಡಲು ಏಕೆ ಸಾಧ್ಯವಾಗುವುದಿಲ್ಲ?