ಬೆಂಗಳೂರು: ‘ಐಎಎಸ್ ಅಧಿಕಾರಿಯಾಗಬೇಕು ಎಂಬುದು ನಮ್ಮ ಕನಸು. ಆ ನಿಟ್ಟಿನಲ್ಲಿಯೇ ನಾವು ಅಭ್ಯಾಸ ನಡೆಸುತ್ತಿದ್ದೇವೆ. ಆ ಓದು ಈ ಕ್ವಿಜ್ ಸ್ಪರ್ಧೆಯಲ್ಲಿ ಗೆಲ್ಲಲು ನೆರವಾಯಿತು. ಈ ಸ್ಪರ್ಧೆಯಲ್ಲಿ ಗೆಲುವು ನಮ್ಮ ಗುರಿಗೆ ಮತ್ತಷ್ಟು ಪ್ರೇರಣೆಯಾಗಿದೆ’
–ಕ್ವಿಜ್ ಚಾಂಪಿಯನ್ಷಿಪ್ನಲ್ಲಿ ಮೊದಲ ಸ್ಥಾನ ಗಳಿಸಿದ ಮರಿಮಲ್ಲಪ್ಪ ಪ್ರೌಢಶಾಲೆಯ ಎಸ್.ಸುಷ್ಮಿತಾ ಹಾಗೂ ಸಿ.ವೈಷ್ಣವಿ ಅವರ ಮನದಾಳದ ಮಾತುಗಳಿವು.
‘ಇಂಥ ಅವಕಾಶಗಳಿಂದ ನಮ್ಮ ಬುದ್ಧಿಶಕ್ತಿ ಹೆಚ್ಚುತ್ತಾ ಹೋಗುತ್ತದೆ. ಸ್ಪರ್ಧೆಗಳನ್ನು ಧೈರ್ಯದಿಂದ ಎದುರಿಸಲು ಹುಮ್ಮಸ್ಸು ಬರುತ್ತದೆ. ಹೊಸ ವಿಷಯವನ್ನು ಕಲಿಯಲು ಅವಕಾಶ ಸಿಗುತ್ತದೆ’ ಎಂದು ಅವರು ಹೇಳಿದರು.
15 ವರ್ಷ ವಯಸ್ಸಿನ ವೈಷ್ಣವಿ ಅವರದ್ದು ಮೂಲತಃ ಮೈಸೂರು. ತಂದೆ ಎಚ್.ಎಸ್.ಚಂದ್ರಬಾಬು ಅವರು ಮೆಡಿಕಲ್ ಟ್ರ್ಯಾನ್ಸ್ಕ್ರಿಪ್ಷನಿಸ್ಟ್. ತಾಯಿ ಪದ್ಮಜಾ ಅವರು ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪೆನಿಯಲ್ಲಿ ಉದ್ಯೋಗಿ.
‘ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಸ್ಪರ್ಧೆಯಲ್ಲಿ ನನ್ನ ಮಗಳು ಮೊದಲ ಸ್ಥಾನ ಪಡೆಯುವ ಮೂಲಕ ಖುಷಿಗೆ ಕಾರಣಳಾಗಿದ್ದಾಳೆ. ಈ ವಿಷಯವನ್ನು ಸ್ನೇಹಿತರೊಂದಿಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ’ ಎಂದಿದ್ದು ಚಂದ್ರಬಾಬು.
‘ಮಗಳು ಐಎಎಸ್ ಅಧಿಕಾರಿಯಾಗಬೇಕು ಎಂಬುದು ನನ್ನ ಕನಸು ಕೂಡ. ಜಗತ್ತಿನ ವಿದ್ಯಮಾನಗಳ ಬಗ್ಗೆ ಆಕೆಗೆ ಆಸಕ್ತಿ ಹೆಚ್ಚು. ಕನ್ನಡ ಪುಸ್ತಕ ಸಂಗ್ರಹದಲ್ಲೂ ಹೆಚ್ಚು ಒಲವು. ಓದಿನಲ್ಲೂ ಮುಂದು’ ಎಂದರು.
16 ಹರೆಯದ ಎಸ್.ಸುಷ್ಮಿತಾ ಕೂಡ ಮೈಸೂರಿನವರು. ತಂದೆ ಸತ್ಯನಾರಾಯಣ ಅವರು ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಲೆಕ್ಕಾಧಿಕಾರಿ. ತಾಯಿ ಸಂಧ್ಯಾ ಅವರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ.
‘ಇದೊಂದು ನಮ್ಮ ಪಾಲಿನ ಸ್ಮರಣೀಯ ದಿನ. ಇಷ್ಟೊಂದು ಮಕ್ಕಳ ನಡುವೆ ನನ್ನ ಪುತ್ರಿ ಟ್ರೋಫಿ ಜಯಿಸಿದ್ದಾಳೆ. ಪೋಷಕರು ಹೆಮ್ಮೆ ಪಡಲು ಇದಕ್ಕಿಂತ ಸಂತೋಷದ ಕ್ಷಣ ಯಾವುದಿದೆ ಹೇಳಿ?’ ಎಂದು ಖುಷಿ ವ್ಯಕ್ತಪಡಿಸಿದ್ದು ಸಂಧ್ಯಾ.
‘ಪ್ರತಿವರ್ಷ ಆಕೆ ‘ಅತ್ಯುತ್ತಮ ವಿದ್ಯಾರ್ಥಿನಿ’ ಎಂಬ ಪುರಸ್ಕಾರ ಪಡೆಯುತ್ತಾಳೆ. ಇತ್ತೀಚೆಗಷ್ಟೇ ವಾರಾಣಸಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಆರನೇ ಸ್ಥಾನ ಪಡೆದಿದ್ದಳು. ಅಪ್ಪ–ಮಗಳು ಯಾವುದಾದರೂ ವಿಷಯದ ಮೇಲೆ ಸದಾ ಚರ್ಚೆ ನಡೆಸುತ್ತಿರುತ್ತಾರೆ’ ಎಂದು ಹೆಮ್ಮೆಯಿಂದ ನುಡಿದರು.
‘ಹೊಸತನಕ್ಕೆ ಹೃದಯ ತುಡಿಯಬೇಕು’
ಚಾಂಪಿಯನ್ನರ ಬಲ, ಸೋತವರ ಛಲ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.