ನವದೆಹಲಿ (ಪಿಟಿಐ): ಜಾಗತಿಕ ಮಟ್ಟದಲ್ಲಿ ತಲ್ಲಣ ಮೂಡಿಸಿರುವ ಐ.ಎಸ್.ಐ.ಎಸ್ ಭಯೋತ್ಪಾದನಾ ಸಂಘಟನೆಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ.
ಐ.ಎಸ್ ಟ್ವಿಟರ್ ಖಾತೆ ನಿರ್ವಹಿಸುತ್ತಿದ್ದ ಆರೋಪದ ಮೇಲೆ ಬೆಂಗಳೂರಿನಲ್ಲಿ ಮೆಹದಿ ಮಸ್ರೂರ್ ಬಿಸ್ವಾಸ್ನನ್ನು ಬಂಧಿಸಿದ ಬೆನ್ನಲ್ಲೇ ಸರ್ಕಾರದ ಈ ನಿರ್ಧಾರ ಹೊರ ಬಿದ್ದಿದೆ.
ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿ ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಆ್ಯಂಡ್ ಸಿರಿಯಾ (ಐ.ಎಸ್.ಐ.ಎಸ್) ಸಂಘಟನೆಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಮಂಗಳವಾರ ಲೋಕಸಭೆಗೆ ತಿಳಿಸಿದರು.
ಬೆರಳೆಣಿಕೆಯಷ್ಟು ಯುವಕರು ಐ.ಎಸ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಚಟುವಟಿಕೆಗಳು ದೇಶದಲ್ಲಿ ವ್ಯಾಪಿಸದಂತೆ ಕಣ್ಗಾವಲು ಇಡಲಾಗಿದ್ದು, ಎಲ್ಲ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದೇ ಉದ್ದೇಶದಿಂದ ಐ.ಎಸ್ ಭಯೋತ್ಪಾದನಾ ಸಂಘಟನೆಯನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಈ ಭಯೋತ್ಪಾದನಾ ಸಂಘಟನೆಗೆ ದೇಶದ ಯುವ ಜನತೆಯಿಂದ ಹೇಳಿ ಕೊಳ್ಳುವಂತಹ ಬೆಂಬಲ ದೊರೆತಿಲ್ಲ. ಇಂಥ ಸಂಘಟನೆಗಳಿಂದ ಪ್ರಭಾವಕ್ಕೊಳಗಾಗದಂತೆ ತಮ್ಮ ಮಕ್ಕಳನ್ನು ರಕ್ಷಿಸಿದ ಅಲ್ಪಸಂಖ್ಯಾತರಿಗೆ ಸಹಜವಾಗಿ ಈ ಗೌರವ ಸಲ್ಲಬೇಕು ಎಂದು ಸಿಂಗ್ ಅಭಿನಂದನೆ ಸಲ್ಲಿಸಿದರು.
ಭಯೋತ್ಪಾದನಾ ಅಥವಾ ವಿಧ್ವಂಸಕ ಕೃತ್ಯದ ಶಂಕೆಯ ಮೇಲೆ ಅಲ್ಪಸಂಖ್ಯಾತ ಸಮುದಾಯದ ಅಮಾಯಕರನ್ನು ಬಂಧಿಸಿಲ್ಲ. ಒಂದು ವೇಳೆ ಹಾಗೇನಾದರೂ ಬಂಧಿಸಿದರೆ ತಮ್ಮ ಗಮನಕ್ಕೆ ತರುವಂತೆ ಅವರು ಮನವಿ ಮಾಡಿದರು. ಬಹುತೇಕ ದೇಶಗಳಲ್ಲಿ ಅಲ್ಪಸಂಖ್ಯಾತರು ಐ.ಎಸ್ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದ್ದಾರೆ. ಆದರೆ, ನಮ್ಮ ದೇಶದಲ್ಲಿ ಹಾಗಾಗ ದಿರುವುದು ಸಮಾಧಾನದ ಸಂಗತಿ ಎಂದರು.
ಒಟ್ಟಾರೆ ದೇಶದಲ್ಲಿ ಐ.ಎಸ್ ಸಂಘಟನೆಯ ಪ್ರಭಾವ ಅಷ್ಟಾಗಿ ಇಲ್ಲ. ಹೀಗಾಗಿ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ ಎಂದು ಅಭಯ ನೀಡಿದರು.
ಎನ್ಎಸ್ಜಿ ಬಲವರ್ಧನೆ, ವಲಸೆ ವ್ಯವಸ್ಥೆ ಮೇಲೆ ಕಣ್ಗಾವಲು, ಸೈಬರ್ ಚಟುವಟಿಕೆ ಮೇಲೆ ನಿಗಾ ಸೇರಿದಂತೆ ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಗೃಹಖಾತೆ ರಾಜ್ಯ ಸಚಿವ ಕಿರಣ್ ರಿಜುಜು ತಿಳಿಸಿದರು.
ಕೇರಳ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳ ಯುವಕರು ಈ ಸಂಘಟನೆಗೆ ಸೇರಿದ ಬಗ್ಗೆ ಮಾಹಿತಿ ಇಲ್ಲ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.