ಸರ್ಕಾರಿ ಉದ್ಯೋಗದಲ್ಲಿರುವ ಎಲ್ಲ ನೌಕರರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕೆಂದು ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ನೀಡಿರುವ ತೀರ್ಪನ್ನು ಬಿ.ಶ್ರೀಪಾದ ಭಟ್ ಐತಿಹಾಸಿಕ ಎಂದು ಬಣ್ಣಿಸಿದ್ದಾರೆ (ಚರ್ಚೆ, ಜುಲೈ 28). ಸರ್ಕಾರ ವೇತನ ನೀಡಿ ಸಲಹುತ್ತಿರುವ ಮುಲಾಜಿಗೆ ಸರ್ಕಾರಿ ನೌಕರರು ತಮಗೆ ಇಷ್ಟವಾದ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ಓದಿಸುವ ಹಕ್ಕನ್ನು ದಮನಿಸುವಂತಿರುವ ಈ ತೀರ್ಪನ್ನು ಐಸಿಹಾಸಿಕ ಎಂದು ಹೇಗೆ ಒಪ್ಪುವುದು?
ಇತರರ ಮಕ್ಕಳು ಕಾನ್ವೆಂಟ್ಗಳಲ್ಲಿ ಓದಬಹುದು, ಸರ್ಕಾರಿ ನೌಕರರ ಮಕ್ಕಳು ಮಾತ್ರ ಸರ್ಕಾರಿ ಶಾಲೆಗಳಲ್ಲಿ ಓದುವುದು ಕಡ್ಡಾಯ ಎಂದಾದರೆ, ಶಿಕ್ಷಣ ಹಕ್ಕಿನಲ್ಲಿ ಸಮಾನತೆ ನಿರೀಕ್ಷಿಸುವುದಾದರೂ ಹೇಗೆ?
ಇಂದು ಸರ್ಕಾರಿ ಶಾಲೆಗಳಲ್ಲಿ ಅನೇಕ ಉಚಿತ ಭಾಗ್ಯ ಯೋಜನೆಗಳಿವೆ. ಪಾಲಕರಿಗೆ ಯಾವುದೇ ಹೊರೆಯಿಲ್ಲವೆಂಬುದು ಸರ್ವವಿದಿತ. ಹೀಗಿದ್ದರೂ ಮಧ್ಯಮ ವರ್ಗ ಹಾಗೂ ಬಡತನ ರೇಖೆಯಲ್ಲಿರುವ ಪಾಲಕರು ಕೂಡ ದುಬಾರಿ ಶುಲ್ಕ ತೆತ್ತು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೇ ಏಕೆ ಸೇರಿಸುತ್ತಿದ್ದಾರೆ?
ಈ ಪ್ರಶ್ನೆಗೆ ಪ್ರಾಮಾಣಿಕ ಉತ್ತರವನ್ನು ಕಂಡುಕೊಂಡರೆ ಬಹುಶಃ ಸರ್ಕಾರಿ ಶಾಲೆಗಳಲ್ಲಿ ಇರುವ ಶಿಕ್ಷಣದ ಗುಣಮಟ್ಟವನ್ನು ಮೌಲ್ಯಮಾಪನ ಮಾಡಬಹುದು.