ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ಆಯ್ಕೆ ಪಟ್ಟಿಯನ್ನು ರಾಜ್ಯ ಸಚಿವ ಸಂಪುಟ ತಿರಸ್ಕರಿಸಿದೆ. ಈ ನೇಮಕಾತಿಯ ವಿವಿಧ ಹಂತಗಳಲ್ಲಿ ಯಾವ ಯಾವ ಬಗೆಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಬಗ್ಗೆ ಆಘಾತಕಾರಿ ವಿವರಗಳನ್ನು ಸಿಐಡಿ ವರದಿ ನೀಡಿತ್ತು. ಇದನ್ನು ಆಧರಿಸಿ ಆಯ್ಕೆ ಪಟ್ಟಿಯನ್ನು ತಿರಸ್ಕರಿಸುವಂತಹ ನಿರ್ಧಾರವನ್ನು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರ ಕೈಗೊಂಡಿರುವುದು ಮಹತ್ವದ ಹೆಜ್ಜೆ. ಇಂತಹದೊಂದು ದಿಟ್ಟ ನಿರ್ಧಾರ ಕೈಗೊಳ್ಳಲು ರಾಜ್ಯ ಸಚಿವ ಸಂಪುಟದಲ್ಲೇ ವಿರೋಧದ ಕೆಲವು ದನಿಗಳೂ ಇದ್ದವು.
ಈ ಒತ್ತಡಗಳನ್ನು ಮೀರಿ ನಿರ್ಧಾರವನ್ನು ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾಯಕತ್ವದ ಆದರ್ಶವನ್ನು ಮೆರೆದಿದ್ದಾರೆ. ಅದರಲ್ಲೂ ದಲಿತ ನಾಯಕರ ವಿರೋಧವನ್ನು ಎದುರು ಹಾಕಿಕೊಳ್ಳುವುದು ಸುಲಭದ್ದೇನಲ್ಲ. ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಇಂತಹ ನಿರ್ಧಾರಗಳು ದೂರಗಾಮಿ ಪರಿಣಾಮಗಳನ್ನು ಬೀರುವಂತಹದ್ದು. ಸಮಾಜಕ್ಕೆ ಗಟ್ಟಿ ಸಂದೇಶವನ್ನು ರವಾನಿಸುವ ಇಂತಹ ನಿರ್ಧಾರ ಶ್ಲಾಘನೀಯ. ಆಯ್ಕೆಯಾದ ಕೆಲವು ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅವರು ವರ್ಷಾನುಗಟ್ಟಲೆ ಹಾಕಿದ ಶ್ರಮ ವ್ಯರ್ಥವಾಗಿ ತೊಂದರೆಯಾಗಿದೆ ಎಂಬುದನ್ನೂ ಕಡೆಗಣಿಸುವಂತಿಲ್ಲ. ಆದರೆ ಕೊಳೆತು ನಾರುತ್ತಿರುವ ವ್ಯವಸ್ಥೆಯ ಶುದ್ಧೀಕರಣದ ಪ್ರಕ್ರಿಯೆಯಲ್ಲಿ ಇದು ಅನಿವಾರ್ಯ. ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಸಿದ್ಧಾಂತದ ಕುರಿತಾದ ಕಾಳಜಿಗೆ ಬದ್ಧತೆ ಇರಬೇಕಾದುದು ಇಲ್ಲಿ ಅವಶ್ಯ.
ಹಲವು ದಶಕಗಳಿಂದ ಕೆಪಿಎಸ್ಸಿಯಲ್ಲಿ ಅಕ್ರಮಗಳು ನಡೆದುಕೊಂಡೇ ಬಂದಿವೆ. 1998, 1999 ಹಾಗೂ 2004ರ ಸಾಲಿನ ನೇಮಕಾತಿಗಳಲ್ಲಿ ಅಕ್ರಮಗಳು ನಡೆದಿತ್ತು ಎಂಬುದನ್ನೂ ಸಿಐಡಿ ತನಿಖಾ ವರದಿ ಹೇಳಿದೆ. 1998ರಿಂದ 2004ರ ಅವಧಿಯಲ್ಲಿ ಗೆಜೆಟೆಡ್ ಪ್ರೊಬೇಷನರಿಗಳ ನೇಮಕಾತಿಗೆ ಸಂಬಂಧಿಸಿದಂತೆ ನಡೆದ ಅವ್ಯವಹಾರಗಳು ಹಾಗೂ ಭ್ರಷ್ಟಾಚಾರ ಆರೋಪದ ಮೇಲೆ ಕೆಪಿಎಸ್ಸಿಯ ಅಂದಿನ ಅಧ್ಯಕ್ಷ ಎಚ್.ಎನ್.ಕೃಷ್ಣ ಅವರು ಜೈಲಿಗೂ ಹೋಗಿದ್ದರು. ಲಕ್ಷಗಟ್ಟಲೆ ಲಂಚ ನೀಡಿ ಹುದ್ದೆ ಗಿಟ್ಟಿಸಿದವರು ಮುಂದೆ ಅಧಿಕಾರಿಗಳಾದ ನಂತರ ಪ್ರಾಮಾಣಿಕ ಆಡಳಿತ ನೀಡುತ್ತಾರೆಂದು ನಿರೀಕ್ಷಿಸುವುದು ಕಷ್ಟ. ಈ ಭ್ರಷ್ಟಾಚಾರದ ಸರಪಳಿಗೆ ಕೊನೆಯೇ ಇಲ್ಲದಂತಾಗುತ್ತದೆ. ಭ್ರಷ್ಟಾಚಾರ ಸಾಂಸ್ಥೀಕರಣಗೊಳ್ಳುತ್ತಾ ಸಾಗಿದಂತೆ ಸೃಷ್ಟಿಯಾಗುವ ರಾಜಕೀಯ ಸಂಸ್ಕೃತಿ ಕಡೆಗೆ ನಮ್ಮನ್ನು ಎಲ್ಲಿಗೆ ಒಯ್ಯಬಹುದು ಎಂಬುದನ್ನು ನಾವು ವಿಮರ್ಶಿಸಬೇಕು.
ಅಭ್ಯರ್ಥಿಗಳು ಹುದ್ದೆ ಪಡೆದುಕೊಳ್ಳಲು ತಮ್ಮ ಕ್ಷೇತ್ರಗಳ ರಾಜಕಾರಣಿಗಳ ಶಿಫಾರಸು ಅಥವಾ ಪ್ರಭಾವ ಬಳಸಿಕೊಂಡಲ್ಲಿ ತಪ್ಪೇನೂ ಇಲ್ಲ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಸದನದಲ್ಲೇ ಈ ಹಿಂದೆ ಹೇಳಿದ್ದುದನ್ನು ಇಲ್ಲಿ ಸ್ಮರಿಸಬಹುದು. ಈಗ ಅದೇ ಕುಮಾರಸ್ವಾಮಿಯವರು, ಆಯ್ಕೆಪಟ್ಟಿ ರದ್ದತಿ ವಿರುದ್ಧ ಧರಣಿ ಕೂರುವುದಾಗಿ ಹೇಳುವಂತಹ ಮಟ್ಟಕ್ಕೆ ಹೋಗಿರುವುದು ನಾಚಿಕೆಗೇಡು. ಈ ವಿಷಯದಲ್ಲಿ ಜಾತಿ ರಾಜಕಾರಣ ಎಳೆದು ತರುವುದು ಸರಿಯಲ್ಲ. ಹಾಗೆಯೇ ಇದನ್ನು ರಾಜಕೀಯಕರಣಗೊಳಿಸಲು ಜೆಡಿಎಸ್ ಹಾಗೂ ಬಿಜೆಪಿಯ ಕೆಲವು ನಾಯಕರು ಮುಂದಾಗಿರುವುದೂ ಸರಿಯಲ್ಲ.
ಆಡಳಿತ ಸೇವೆ ಅಧಿಕಾರಿಗಳು, ಉಪನ್ಯಾಸಕರು ಹಾಗೂ ವಿವಿಧ ಇಲಾಖೆಗಳ ಬಹುತೇಕ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಕೆಪಿಎಸ್ಸಿ ಮೂಲಕ ನಡೆ-ಯಬೇಕು. ಇದಕ್ಕಾಗಿ ಅದಕ್ಕೆ ಕಟ್ಟಡ, ಸಿಬ್ಬಂದಿ ಹೀಗೆ ಎಲ್ಲಾ ಮೂಲಸೌಕರ್ಯ ಇದೆ. ಕೋಟ್ಯಂತರ ಹಣವೂ ವ್ಯಯವಾಗುತ್ತಿದೆ. ಹೀಗಿದ್ದೂ ಎಷ್ಟೋ ಸಂದರ್ಭಗಳಲ್ಲಿ ನೇರ ನೇಮಕಾತಿಗಳನ್ನು ಮಾಡಬೇಕಾದ ಸ್ಥಿತಿ ಇರುವುದು ಸರಿಯಲ್ಲ. ನಿಜಕ್ಕೂ ಕೆಪಿಎಸ್ಸಿಗೆ ಕಾಯಕಲ್ಪ ಬೇಕಾಗಿದೆ. ಈ ನಿಟ್ಟಿನಲ್ಲಿ ಈ ನಿರ್ಣಯ ಮೊದಲ ಹೆಜ್ಜೆ. ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಇದು ಚಾಲನೆಯಾಗಬೇಕು. ಅರ್ಹ ಯುವಜನರಿಗೆ ಉದ್ಯೋಗಗಳು ಲಭಿಸುವಂತಾಗಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.