ಶಾಲಾ ವಿದ್ಯಾರ್ಥಿಗಳು ಬಿಡಿಸಿರುವ ಚಿತ್ರಗಳ ಪ್ರದರ್ಶನವನ್ನು ನಗರದ ಎಂ.ಜಿ.ರಸ್ತೆಯಲ್ಲಿರುವ ಮೆಟ್ರೊ ರೈಲು ನಿಲ್ದಾಣದ ಕೆಳಭಾಗದಲ್ಲಿರುವ ರಂಗೋಲಿ ಕೇಂದ್ರದ ಬೆಳಕು ಕಲಾ ಗ್ಯಾಲರಿಯಲ್ಲಿ ಏರ್ಪಡಿಸಲಾಗಿದೆ.
ಕರ್ನಾಟಕ ಲಲಿತ ಕಲಾ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿರುವ ಈ ಪ್ರದರ್ಶನದಲ್ಲಿ ಗದಗದ ವಿಜಯಾ ಕಲಾ ಶಾಲೆಯ ವಿದ್ಯಾರ್ಥಿಗಳಾದ ಐಶ್ವರ್ಯ, ಸುರೇಶ್, ಜಯಶ್ರೀ, ಲೋಕೇಶ್, ಯಮನೂರ್ಸಾಬ್ ಅವರು ಬಿಡಿಸಿರುವ ಚಿತ್ರಗಳನ್ನು ಪ್ರದರ್ಶಿಸಲಾಗಿದೆ.
ಪ್ರಕೃತಿಯ ರಮ್ಯ ದೃಶ್ಯಗಳು, ಪಕ್ಷಿಗಳ ಚಿತ್ರ, ಮೃಗರಾಜನ ಚಿತ್ರ, ಕಲ್ಲಿನ ರಥದ ಚಿತ್ರ, ಹೂವುಗಳನ್ನು ಅಲಂಕರಿಸಿದ ಹೂವುದಾನಿಯ ಚಿತ್ರಗಳು ಒಂದಕ್ಕೊಂದು ವಿಭಿನ್ನವಾಗಿದ್ದು ಕಲಾಸಕ್ತರಿಗೆ ನೈಜ ಚಿತ್ರಣವನ್ನು ನೀಡುವಲ್ಲಿ ಸಹಕಾರಿಯಾಗಲಿದೆ.
ಒಟ್ಟು ಐವರು ವಿದ್ಯಾರ್ಥಿಗಳ ಈ ಕಲಾ ಪ್ರದರ್ಶನವನ್ನು ‘ಐದು ಬೆರಳುಗಳ ಚಿತ್ತ ಚಿತ್ತಾರ’ (ಫೈವ್ ಫಿಂಗರ್ಸ್ ಗ್ರೂಪ್ಸ್ ಪೇಂಟಿಂಗ್) ಎಂಬ ಹೆಸರಿನಲ್ಲಿ ಆಯೋಜಿಸಲಾಗಿದೆ. ಅಕ್ಟೋಬರ್ 24ರಿಂದ 26ರ ವರೆಗೆ ನಡೆಯಲಿದೆ. ಸಮಯ: ಬೆಳಿಗ್ಗೆ 11 ರಿಂದ 7.30.
ಪ್ರದರ್ಶನದ ವಿಳಾಸ : ಬೆಳಕು ಕಲಾ ಗ್ಯಾಲರಿ, ರಂಗೋಲಿ, ಮೆಟ್ರೋ ಕಲಾಕೇಂದ್ರ, ಎಂ.ಜಿ.ರಸ್ತೆ, ಬೆಂಗಳೂರು.
–ಬಳಕೂರು ವಿ.ಎಸ್. ನಾಯಕ