ಹಿರಿಯೂರು (ಚಿತ್ರದುರ್ಗ ಜಿಲ್ಲೆ): ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವವರೆಗೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಗ್ರಾಮಸ್ಥರು ಪಟ್ಟುಹಿಡಿದು ಮತದಾನ ಬಹಿಷ್ಕರಿಸಿದ ಘಟನೆ ತಾಲ್ಲೂಕಿನ ಐಮಂಗಲ ಗ್ರಾಮದಲ್ಲಿ ನಡೆದಿದೆ.
ಐದಾರು ವರ್ಷದಿಂದ ಕುಡಿಯುವ ನೀರಿಗೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಗೋಗರೆಯುತ್ತ ಬಂದರೂ ಬೇಡಿಕೆ ಈಡೇರಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಮತದಾನ ಬಹಿಷ್ಕರಿಸಲು ಮುಂದಾದರು. ಮತ ಬಹಿಷ್ಕಾರಕ್ಕೆ ಬೆಂಬಲ ನೀಡಿದವರಲ್ಲಿ ಬಹುತೇಕ ಮಹಿಳೆಯರೇ ಇದ್ದುದು ವಿಶೇಷ.
‘ನೀರು ತರುವುದು ಎಷ್ಟು ಕಷ್ಟ ಎನ್ನುವುದು ಗಂಡಸರಿಗೆ ಹೇಗೆ ಅರ್ಥವಾಗಬೇಕು. ನೀರಿಗಾಗಿ ಪರದಾಡಿದ್ದು ಸಾಕಾಗಿದೆ. ಮತದಾನವೂ ಬೇಡ, ನಮಗೆ ಜನಪ್ರತಿನಿಧಿಗಳೂ ಬೇಡ. ಹೀಗಾಗಿ ಯಾರೂ ಮತ ಚಲಾವಣೆ ಮಾಡಬಾರದು’ ಎಂಬ ತೀರ್ಮಾನಕ್ಕೆ ಗ್ರಾಮಸ್ಥರು ಬಂದಿದ್ದರು.
ಮತದಾನ ಬಹಿಷ್ಕರಿಸಿದ ಸುದ್ದಿ ತಿಳಿಯುತ್ತಿದ್ದಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂಜುಶ್ರೀ, ಉಪ ಕಾರ್ಯದರ್ಶಿ ರುದ್ರಪ್ಪ, ಶಾಸಕ ಡಿ. ಸುಧಾಕರ್, ಸಂಜೆಯ ವೇಳೆಗೆ ಬಿಜೆಪಿ ಅಭ್ಯರ್ಥಿ ಜನಾರ್ದನಸ್ವಾಮಿ ಗ್ರಾಮಕ್ಕೆ ಆಗಮಿಸಿ ಮನವಿ ಮಾಡಿದರೂ, ಗ್ರಾಮಸ್ಥರು. ಪಟ್ಟು ಸಡಿಲಿಸಲಿಲ್ಲ. ಗ್ರಾಮದಲ್ಲಿ ವಾಣಿ ವಿಲಾಸ ಜಲಾಶಯದಿಂದ ಚಿತ್ರದುರ್ಗ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಕೊಳವೆ ಮಾರ್ಗ ಹಾದುಹೋಗಿದೆ. ತಾತ್ಕಾಲಿಕವಾಗಿ ನೀರಿನ ಸಮಸ್ಯೆ ಪರಿಹಾರಕ್ಕೆ ಈ ಕೊಳವೆಯಿಂದ ನೀರು ಕೊಡಬೇಕು. ಟ್ಯಾಂಕರ್ಗಳಿಂದ ತರುವ ನೀರು ಎಲ್ಲರಿಗೂ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು.
ಸಂಜೆ 5ಕ್ಕೆ ಜನಾರ್ದನಸ್ವಾಮಿ ಅವರ ಕೋರಿಕೆಗೆ ಆರಂಭದಲ್ಲಿ ಒಪ್ಪಿಗೆ ಸೂಚಿಸಿದಂತೆ ಕಂಡ ಗ್ರಾಮಸ್ಥರು ಜಿಲ್ಲಾಧಿಕಾರಿ ಬಂದು ಭರವಸೆ
ನೀಡುವವರೆಗೆ ಬಹಿಷ್ಕಾರ ಮುಂದುವರಿಸಲಾಗುವುದು ಎಂದು ಪಟ್ಟು ಹಿಡಿದರು.
1127 ಮತದಾರರಿರುವ ಗ್ರಾಮದಲ್ಲಿ ಬೆಳಿಗ್ಗೆ 9.30ರ ವೇಳೆಯಲ್ಲಿ ಕೇವಲ ಮೂರು ಮಂದಿ ಮತ ಚಲಾಯಿಸಿದ್ದರು. ನಂತರ ಗ್ರಾಮಸ್ಥರು ಒಟ್ಟುಗೂಡಿ ಮತದಾನವಾಗದಂತೆ ಒಗ್ಗಟ್ಟು ಪ್ರದರ್ಶಿಸಿದರು.
ಕಾವಲ್ ಪರಭಾರೆ ಖಂಡಿಸಿ ಮತದಾನ ಬಹಿಷ್ಕಾರ
ಚಳ್ಳಕೆರೆ: ಕುದಾಪುರ, ವರವು, ಉಳ್ಳಾರ್ತಿ ಕಾವಲ್ಗಳನ್ನು ಸ್ವಾಯತ್ತ ಸಂಸ್ಥೆಗಳಿಗೆ ಪರಭಾರೆ ಮಾಡಿರುವುದನ್ನು ಖಂಡಿಸಿ ದೊಡ್ಡ ಉಳ್ಳಾರ್ತಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ದೊಡ್ಡ ಉಳ್ಳಾರ್ತಿ ಕರಿಯಣ್ಣ ಮಾತನಾಡಿ, ‘ಸಾವಿರಾರು ಕುಟುಂಬಗಳ ಪಶುಪಾಲನೆಗೆ ಆಧಾರವಾಗಿದ್ದ ಕಾವಲ್ ಭೂಮಿಯನ್ನು ಕೇಂದ್ರ ಸರ್ಕಾರ ಸುತ್ತಮುತ್ತಲಿರುವ ಹಳ್ಳಿಗಳ ಜನರ ಗಮನಕ್ಕೆ ಬರದಂತೆ ಸ್ವಾಯತ್ತ ಸಂಸ್ಥೆಗಳಿಗೆ ಪರಭಾರೆ ಮಾಡಿದೆ. ಕಾವಲ್ ಭೂಮಿ ತಳಕು ಪಂಚಾಯ್ತಿ ವ್ಯಾಪ್ತಿಯ 80 ಹಳ್ಳಿಗಳ ಜೀವನಾಧಾರ. ಇದನ್ನು ಕೇಂದ್ರ ಸರ್ಕಾರ ಲೆಕ್ಕಿಸದೆ ಭೂಮಿಯನ್ನು ಪರಭಾರೆ ಮಾಡಿ ಸಾವಿರಾರು ಜನ ಹಾಗೂ ಜಾನುವಾರುಗಳಿಗೆ ಅನ್ಯಾಯ ಮಾಡಿದೆ.
ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ 3186 ಮತದಾರರಿದ್ದು, ಮೂರು ಮತದಾನ ಕೇಂದ್ರಗಳನ್ನು ಒಳಗೊಂಡಿದೆ. ಯಾವ ಕೇಂದ್ರದಲ್ಲೂ ಮತದಾನ ನಡೆದಿಲ್ಲ. ಮೂರು ಮತದಾನ ಕೇಂದ್ರಗಳಲ್ಲಿ ಕ್ರಮವಾಗಿ 1077, 913, 1196 ಮತದಾರರಿದ್ದು, ಯಾರೂ ಮತದಾನದಲ್ಲಿ ಭಾಗವಹಿಸಿಲ್ಲ’ ಎಂದು ಹೇಳಿದರು. ಅಧಿಕಾರಿಗಳು ಮನವೊಲಿಸಿದರೂ ಗ್ರಾಮಸ್ಥರು ಪಟ್ಟು ಸಡಿಲಿಸಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.