ಬೆಂಗಳೂರು: ಹೆಬ್ಬಗೋಡಿಯ ಶ್ರೀನಿವಾಸ್ ಎಂಬುವರ ಕೊಲೆ ಪ್ರಕರಣ ಸಂಬಂಧ ಐದು ಮಂದಿ ಆರೋಪಿಗಳನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ. ಆನೇಕಲ್ ಬಳಿಯ ಗೊಲ್ಲಹಳ್ಳಿಯ ಸೋಮಶೇಖರ್ (32), ರಂಜಿತ್ (22), ಜಯರಾಮ ರೆಡ್ಡಿ (50), ಮಂಜುನಾಥ್ (22) ಮತ್ತು ನವೀನ್ (27) ಬಂಧಿತರು.
ಶ್ರೀನಿವಾಸ್ಗೆ ಗೊಲ್ಲಹಳ್ಳಿಯ ಮಹಿಳೆಯೊಬ್ಬರ ಜತೆಗೆ ಸ್ನೇಹವಿತ್ತು. ಪರಸ್ಪರರು ಆಗಾಗ ಮೊಬೈಲ್ನಲ್ಲಿ ಮಾತನಾಡುತ್ತಿದ್ದರು. ಇದರಿಂದ ಕೋಪಗೊಂಡ ಮಹಿಳೆಯ ಪತಿ ಸೋಮಶೇಖರ್, ಇವರಿಬ್ಬರ ಸ್ನೇಹವನ್ನು ಅನೈತಿಕ ಸಂಬಂಧ ಎಂದು ಭಾವಿಸಿದ್ದ. ಈ ಸಂಬಂಧ ಇತ್ತೀಚೆಗೆ ಪತ್ನಿ ಜತೆ ಜಗಳವಾಡಿದ್ದ.
ಏ.6ರಂದು ಪತ್ನಿಯ ಮೇಲೆ ಒತ್ತಡ ತಂದು ಶ್ರೀನಿವಾಸ್ಗೆ ಕರೆ ಮಾಡಿಸಿದ್ದ ಸೋಮಶೇಖರ್, ಅವರನ್ನು ಗೊಲ್ಲಹಳ್ಳಿಗೆ ಕರೆಸಿಕೊಂಡಿದ್ದ. ರಾತ್ರಿ 11 ಗಂಟೆ ಸುಮಾರಿಗೆ ಮನೆಯ ಬಳಿ ಬಂದ ಶ್ರೀನಿವಾಸ್ ಅವರನ್ನು ವ್ಯಾನ್ನಲ್ಲಿ ಅಪಹರಿಸಿದ್ದ ಆರೋಪಿಗಳು, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಬಳಿಕ ಶವವನ್ನು ಬೇಗೂರು ಕೆರೆಯಲ್ಲಿ ಬಿಸಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಏ.9ರಂದು ಕೆರೆಯಲ್ಲಿ ಶ್ರೀನಿವಾಸ್ ಅವರ ಶವ ಪತ್ತೆಯಾಗಿತ್ತು. ಅವರ ಮೊಬೈಲ್ಗೆ ಬಂದಿದ್ದ ಕರೆಗಳ ಮಾಹಿತಿಯ ಆಧಾರದ ಮೇಲೆ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.