‘ಆಓ ಗೊಂದಲ’ಕ್ಕೆ ಸಂಬಂಧಿಸಿದ ಪತ್ರ ಓದಿದಾಗ (ವಾ.ವಾ., ಮೇ 23) ಗುರುಗಳಾದ ಹಾ.ಮಾ.ನಾಯಕರು ಭಾಷಾ ವಿಜ್ಞಾನ ತರಗತಿಯಲ್ಲಿ ಹೇಳಿದ್ದು ನೆನಪಾಯಿತು.
ಒಮ್ಮೆ ಅವರು ಉತ್ತರ ಕರ್ನಾಟಕದಲ್ಲಿ ಸಂಚರಿಸುತ್ತಿದ್ದಾಗ ಅಂಗಡಿಗಳ ನಾಮಫಲಕಗಳನ್ನು ನೋಡುತ್ತಿದ್ದರು. ಆಗ ‘ನರ್ತಕಿ ಬಾರ’ ಎಂಬ ಫಲಕ ನೋಡಿ ಅವರಿಗೆ ಆಘಾತವಾಯಿತಂತೆ. ‘ನೋಡಿ ಎಲ್ಲಿಗೆ ಬಂತು!’ ಎಂದು ವಿಷಾದಿಸಿದರು.
ಅದು ಅವರಿಗೆ ನೈತಿಕತೆಯ ಸಮಸ್ಯೆಯಾಗಿ ಕಾಣಿಸಿತ್ತು. ಅದು ಕುಣಿಯೋಣು ಬಾರಾ ಅಲ್ಲವೆಂದೂ, ಕುಡಿಯೋಣು ಬಾರಾ ಕರೆ ಎಂದೂ ಹೇಳಿದೆ. ‘ಉತ್ತರ ಕರ್ನಾಟಕದವರು ಬರವಣಿಗೆಯಲ್ಲಿ ಹಿಂದಿಯನ್ನು ಅನುಕರಿಸುತ್ತಾರೆ. ಸ್ವರಾಂತವಾಗಿ ಬರೆದು ವ್ಯಂಜನಾಂತವಾಗಿ ಉಚ್ಚರಿಸುತ್ತಾರೆ.
ಮೈಸೂರ, ಬೆಂಗಳೂರ ಎಂದು ಬರೆದು ಮೈಸೂರ್, ಬೆಂಗಳೂರ್ ಎನ್ನುವಂತೆ ಬಾರ ಎಂದು ಬರೆದರೂ ಅದನ್ನು ಬಾರ್ ಎಂದು ಓದುತ್ತಾರೆ’ ಎಂಬ ವಿವರಣೆ ನೀಡಿದೆ. ಅದು ಅವರಿಗೆ ಒಪ್ಪಿಗೆಯಾದಂತೆ ತೋರಿರಲಿಲ್ಲ.
ಕನ್ನಡದಲ್ಲಿ ಪದದ ಆರಂಭದಲ್ಲಿ ಮಾತ್ರ ಸ್ವರಗಳು ಸ್ವತಂತ್ರವಾಗಿ ಬರುತ್ತವೆ. ಹಿಂದಿಯಲ್ಲಿರುವಂತೆ ಆಓ, ಮುಂಬ ಇ ಎಂದು ಸ್ವರಗಳು ಒಟ್ಟಾಗಿ ಬರುವುದಿಲ್ಲ. ವ್ಯಂಜನದ ಆನಂತರ ಬರುವ ಸ್ವರವು ವ್ಯಂಜನದ ಜೊತೆ ಸೇರಿ ಉಚ್ಚಾರಣೆಯಾಗುತ್ತದೆ.
ಆದ್ದರಿಂದ ಆದಿಯಲ್ಲದ ಸ್ಥಾನದಲ್ಲಿ ಬರುವ ಸ್ವರ ಉಚ್ಚಾರಣೆಗೆ ಸಮೀಪವಾಗಿ ಹೋಲುವ ವ್ಯಂಜನವಾಗುತ್ತದೆ. ಹಿಂದಿಯ ಆಓ ಕನ್ನಡದಲ್ಲಿ ಆವೋ, ಮುಂಬ ಇ ಕನ್ನಡದಲ್ಲಿ ಮುಂಬಯಿ ಆಗುತ್ತದೆ. ಒಂದು ಭಾಷೆಯ ಹಾಗೆ ಇನ್ನೊಂದು ಇರುವುದಿಲ್ಲ.