ಬೆಂಗಳೂರು: ಅಧಿಕ ಸಂಖ್ಯೆಯಲ್ಲಿ ತಮ್ಮ ಪರಮಾಧಿಕಾರ ಚಲಾಯಿಸಿದ ಯುವ ಮತದಾರರು; ಮಹದೇವಪುರ ಮತಗಟ್ಟೆಗಳಲ್ಲಿ ಹೆಚ್ಚಾಗಿ ಕಂಡು ಬಂದ ಉತ್ತರ ಭಾರತ ಮೂಲದ ಟೆಕ್ಕಿಗಳು; ಕಸದ ಸಮಸ್ಯೆ ಎದುರಿಸುತ್ತಿರುವ ಮಂಡೂರಿನಲ್ಲಿ ಮತದಾನಕ್ಕೆ ಕಾಣದ ಉತ್ಸಾಹ; ಬಿಕೋ ಎನ್ನುತ್ತಿದ್ದ ಗಾಂಧಿನಗರದ ಮತಕೇಂದ್ರಗಳು; ಮಿಂಚಿ ಮರೆಯಾಗುತ್ತಿದ್ದ ವಿವಿಧ ಪಕ್ಷಗಳ ನಾಯಕರು....
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಗುರುವಾರ ಎದ್ದುಕಂಡ ವಿಶೇಷಗಳಿವು.
ಈ ಕ್ಷೇತ್ರದಲ್ಲಿ 19.30 ಲಕ್ಷ ಮತದಾರರಿದ್ದು, 8.70 ಲಕ್ಷ ಯುವಕರೇ ಇದ್ದಾರೆ. ಅದರಲ್ಲೂ ಟೆಕ್ಕಿಗಳ ಸಂಖ್ಯೆಯೇ ಹೆಚ್ಚು. ಬೆಳಗಿನ ಹೊತ್ತು ಮತಗಟ್ಟೆಗಳ ಮುಂದೆ ಸರದಿ ನಿಂತವರಲ್ಲಿ ಅವರೇ ಹೆಚ್ಚಿನ ಸಂಖ್ಯೆಯಲ್ಲಿ ಕಾಣ ಸಿಗುತ್ತಿದ್ದರು.
ಕ್ಷೇತ್ರದಲ್ಲಿ ಹೊಸದಾಗಿ ಹೆಸರು ನೋಂದಣಿ ಮಾಡಿಕೊಂಡಿದ್ದ ಯುವ ಮತದಾರರಲ್ಲಿ (80 ಸಾವಿರ) ಬಹುತೇಕರು ಮೊದಲ ಮತದಾನದ ಖುಷಿ ಅನುಭವಿಸಿದರು. ಬೆಳಗಿನ 11 ಗಂಟೆ ವೇಳೆಗೆ ಮಹದೇವಪುರ ಮತ್ತು ಸಿ.ವಿ. ರಾಮನ್ನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಶೇ 25ರಷ್ಟು ಮತದಾನವಾಗಿತ್ತು. ಹೂಡಿ ಸರ್ಕಾರಿ ಪಿಯು ಕಾಲೇಜಿನಲ್ಲಿ ತೆರೆಯಲಾಗಿದ್ದ ನಾಲ್ಕು ಮತಗಟ್ಟೆಗಳಲ್ಲಿ ಮಧ್ಯಾಹ್ನದ ಬಿಸಿಲಿನಲ್ಲೂ ಉದ್ದನೆ ಸಾಲುಗಳು ಕಂಡುಬಂದವು.
ಮನೆಯಿಂದ ನೀರಿನ ಬಾಟಲಿ ತಂದಿದ್ದ ಟೆಕ್ಕಿಗಳು ಬಿಸಿಲಿನಲ್ಲಿ ಸುರಿಯುತ್ತಿದ್ದ ಬೆವರು ಒರೆಸಿಕೊಳ್ಳುತ್ತಲೇ ತಮ್ಮ ಸರದಿಗಾಗಿ ತಾಳ್ಮೆಯಿಂದ ಕಾಯುತ್ತ ನಿಂತಿದ್ದರು. ಪಕ್ಕದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲೂ ಮತದಾನಕ್ಕೆ ಜನ ಉತ್ಸಾಹದಿಂದ ನೆರೆದಿದ್ದರು. ‘ಸೂಕ್ಷ್ಮ ಮತಗಟ್ಟೆ’ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಅಲ್ಲಿನ ಮೂರೂ ಕೇಂದ್ರಗಳಿಗೆ ಭದ್ರತಾ ಪಡೆ ಯೋಧರ ಪಹರೆ ಇತ್ತು.
ಅಯ್ಯಪ್ಪನಗರ ಮತಗಟ್ಟೆಯಲ್ಲಿ ಎಂ.ನಾಗರತ್ನಮ್ಮ ಮತ್ತಿತರರು ‘ಮತದಾರರ ಯಾದಿಯಲ್ಲಿ ನಮ್ಮ ಹೆಸರೇ ಇಲ್ಲ’ ಎನ್ನುವ ಆಕ್ರೋಶ ವ್ಯಕ್ತಪಡಿಸುತ್ತಾ ನಿಂತಿದ್ದರು. ಮತದಾರರ ಗುರುತಿನ ಚೀಟಿ ಕೈಯಲ್ಲಿ ಹಿಡಿದಿದ್ದ ಅವರು, ‘ಕಳೆದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮತದಾನ ಮಾಡಿದ್ದೇವೆ. ಈಗೇಕೆ ಇಲ್ಲ’ ಎಂದು ಕೇಳುತ್ತಿದ್ದರು.
‘ಬೇರೆ ಮತಗಟ್ಟೆಗಳಿಗೆ ನಿಮ್ಮ ಹೆಸರು ವರ್ಗಾವಣೆ ಆಗಿರಬಹುದು. ನಮಗೆ ಕೊಟ್ಟ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲ. ಮತದಾನಕ್ಕೆ ಇಲ್ಲಿ ಅವಕಾಶ ಇಲ್ಲ’ ಎಂದು ಮತಗಟ್ಟೆ ಅಧಿಕಾರಿಗಳು ಸಮಜಾಯಿಷಿ ನೀಡುತ್ತಿದ್ದರು.
ಪಕ್ಕದ ಮತಗಟ್ಟೆಯಲ್ಲಿ ಸದ್ದು ಮಾಡಿದ ಮೊಬೈಲ್ ಕಸಿದುಕೊಂಡಿದ್ದಕ್ಕೆ ಹಿರಿಯ ನಾಗರಿಕರೊಬ್ಬರು ಚುನಾವಣಾ ಸಿಬ್ಬಂದಿ ಮೇಲೆ ಹರಿಹಾಯುತ್ತಿದ್ದರು. ಅವರ ಗಲಾಟೆಯಿಂದ ‘ಏನೋ ಅನಾಹುತ ಸಂಭವಿಸಿತು’ ಎಂಬ ಧಾವಂತದಲ್ಲಿ ಜನ ಗುಂಪು ಸೇರಿದರು. ಪೊಲೀಸರು ವಿಷಯ ತಿಳಿಸಿ ಎಲ್ಲರನ್ನೂ ವಾಪಸು ಕಳುಹಿಸಿದರು.
ತ್ಯಾಜ್ಯದ ರಾಶಿಯಿಂದ ಬರುತ್ತಿದ್ದ ವಾಸನೆಯಲ್ಲೇ ಮೂಗು ಮುಚ್ಚಿಕೊಂಡು ಮಂಡೂರಿಗೆ ತೆರಳಿದರೆ ಅಲ್ಲಿನ ಕೇಂದ್ರಗಳಲ್ಲಿ ಮತದಾರರಿಲ್ಲದೆ ಸಿಬ್ಬಂದಿ ಹರಟೆ ಹೊಡೆಯುತ್ತಾ ಕುಳಿತಿದ್ದರು. ‘ಕಸಕ್ಕೆ ಮುಕ್ತಿ ನೀಡುವಂತಹ ಪ್ರತಿನಿಧಿಗಳೇ ಇಲ್ಲ’ ಎಂದು ಬಸ್ ತಂಗುದಾಣದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಎನ್.ಸಿದ್ದರಾಜು ಹೇಳುತ್ತಿದ್ದರು. ಇಲ್ಲಿನ ಮತಗಟ್ಟೆಗಳಲ್ಲಿ ವೆಬ್ಕಾಸ್ಟಿಂಗ್ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಶಿವಾಜಿನಗರ ಕ್ಷೇತ್ರದಲ್ಲಿ ಬೆಳಿಗ್ಗೆ ಬಿರುಸಿನ ಮತದಾನ ನಡೆದರೆ, ಮಧ್ಯಾಹ್ನ ಜನ ಮತ ಕೇಂದ್ರಗಳತ್ತ ತಲೆ ಹಾಕಲಿಲ್ಲ. ಹಲಸೂರಿನ ಮತಗಟ್ಟೆಗಳಂತೂ ಪಕ್ಕದಲ್ಲಿರುವ ಕೆರೆ ನೀರಿನಂತೆ ತಣ್ಣಗಿದ್ದವು. ಸುದ್ದಗುಂಟೆ ಪಾಳ್ಯದಲ್ಲಿ ಮನೆಗಳನ್ನೇ ಬಾಡಿಗೆ ಪಡೆದು ನಡೆಸಲಾಗುತ್ತಿರುವ ಶಾಲೆಗಳಲ್ಲಿ ಎರಡು ಮತಗಟ್ಟೆಗಳನ್ನು ತೆರೆಯಲಾಗಿತ್ತು. ಮತದಾರರಿಗೆ ಸರದಿಯಲ್ಲಿ ನಿಲ್ಲಲು ಹೆಚ್ಚಿನ ಸ್ಥಳಾವಕಾಶ ಇರಲಿಲ್ಲ. ಬಿಸಿಲಿನಲ್ಲೇ ಕಾಯುವ ಅನಿವಾರ್ಯ ಸ್ಥಿತಿ ಉಂಟಾಗಿತ್ತು.
ಮಹದೇವಪುರ ಹಾಗೂ ಸಿ.ವಿ.ರಾಮನ್ನಗರದ ಕೆಲವು ಮತಗಟ್ಟೆಗಳ ಹತ್ತಿರ ವಿವಿಧ ಪಕ್ಷಗಳ ಕಾರ್ಯಕರ್ತರು ಲ್ಯಾಪ್ಟಾಪ್ ಇಟ್ಟುಕೊಂಡು ಮತದಾರರ ಮಾಹಿತಿ ನೋಡಿ ಕೊಡುತ್ತಿದ್ದರು. ಸದ್ದಗುಂಟೆ ಪಾಳ್ಯ ಹಾಗೂ ಸುತ್ತಲಿನ ಪ್ರದೇಶಗಳ ಮತಗಟ್ಟೆಗಳಲ್ಲಿ ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಜತೆಗೆ ಎಎಪಿ ಟೆಂಟ್ಗಳೂ ಗೋಚರಿಸಿದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.