ಬೆಂಗಳೂರು: ನಿಗಮ ಮಂಡಳಿಗಳಿಗೆ ನೇಮಕ ಮಾಡುವಾಗ ತಮ್ಮನ್ನು ಪರಿಗಣಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರುವ ಬಗ್ಗೆ ಕಾಂಗ್ರೆಸ್ನ ಮಾಜಿ ಶಾಸಕರು ನಗರದ ಹೋಟೆಲೊಂದರಲ್ಲಿ ಬುಧವಾರ ಸಂಜೆ ಸಭೆ ಸೇರಿ ಚರ್ಚಿಸಿದರು.
ನೆ.ಲ. ನರೇಂದ್ರಬಾಬು, ಕುಮಾರ ಬಂಗಾರಪ್ಪ, ಎನ್.ಸಂಪಂಗಿ, ಸುರೇಶ್ ಗೌಡ, ಬಿ.ಸಿ ಪಾಟೀಲ್, ಕೆ. ವೆಂಕಟಸ್ವಾಮಿ, ರಹೀಂ ಖಾನ್, ಜಿ.ಡಿ. ನಾಯಕ್ ಸೇರಿದಂತೆ 21 ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
ಪಕ್ಷವು ಸಂಕಷ್ಟದ ಸ್ಥಿತಿಯಲ್ಲಿದ್ದಾಗ ದೃಢವಾಗಿ ನಿಂತು ಪಕ್ಷವನ್ನು ಉಳಿಸಿದ ಮುಖಂಡರನ್ನು ಈಗ ಕಡೆಗಣಿಸಲಾಗುತ್ತಿರುವ ಬಗ್ಗೆ ಸಭೆಯಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ.
ಬೇರೆ ಬೇರೆ ಕಾರಣಗಳಿಗೆ ಚುನಾವಣೆಯಲ್ಲಿ ಸೋತಿರಬಹುದು. ಈ ಹಿಂದೆ ಚುನಾವಣೆಯಲ್ಲಿ ಸೋತ ಹಲವರಿಗೆ ಪಕ್ಷವು ಉನ್ನತ ಸ್ಥಾನಮಾನ ನೀಡಿರುವ ಉದಾಹರಣೆ ಇದೆ. ರಾಜ್ಯದಲ್ಲಿ ಈಗ ಪಕ್ಷ ಅಧಿಕಾರದಲ್ಲಿದೆ. ಪಕ್ಷಕ್ಕಾಗಿ ದುಡಿದವರಿಗೆ ಸರ್ಕಾರ ನೆರವಾಗಬೇಕು. ಅನುಭವಿಗಳಿಗೆ ಅವಕಾಶ ನೀಡುವಂತೆ ನಾಯಕರ ಮೇಲೆ ಒತ್ತಡ ಹಾಕುವ ಬಗ್ಗೆ ಮುಖಂಡರು ಚರ್ಚೆ ನಡೆಸಿದರು.
ಈ ಮುಖಂಡರು ಶುಕ್ರವಾರ ಮತ್ತೆ ಸಭೆ ಸೇರಲಿದ್ದಾರೆ. ‘ಸ್ವ ಕ್ಷೇತ್ರಗಳಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಚರ್ಚೆ ನಡೆಸಲು ಸಭೆ ಕರೆದಿದ್ದೆವು. ಅಧಿಕಾರ ಕಳೆದುಕೊಂಡಿದ್ದರೂ ಮತದಾರರ ಹಿತ ಕಾಯುವುದು ನಮ್ಮ ಕರ್ತವ್ಯ. ಸ್ಥಳೀಯ ಸಂಸ್ಥೆಗಳ ಚುನಾವಣೆ ಹತ್ತಿರ ಬರುತ್ತಿದೆ. ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು’ ಎಂದು ನೆ.ಲ. ನರೇಂದ್ರ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.
‘ಪಕ್ಷಕ್ಕೆ ಕಷ್ಟಕಾಲ ಬಂದಾಗ ನೆರವಿಗೆ ನಿಂತಿದ್ದೇವೆ. ಚುನಾವಣೆಯಲ್ಲಿ ಸೋತಿರಬಹುದು. ಅಂದ ಮಾತ್ರಕ್ಕೆ ಸ್ಥಾನಮಾನ ನೀಡಬಾರದು ಎಂದೇನಿಲ್ಲ. ಅನುಭವದ ಆಧಾರದ ಮೇಲೆ ನಿಗಮ ಮಂಡಳಿಗಳಲ್ಲಿ ಮತ್ತು ಪಕ್ಷದಲ್ಲಿ ನಮಗೆ ಅವಕಾಶ ನೀಡಬೇಕು. ಈ ಸಂಬಂಧ, ಶೀಘ್ರದಲ್ಲಿ ರಾಜ್ಯದ ಉಸ್ತುವಾರಿ ದಿಗ್ವಿಜಯ್ ಸಿಂಗ್, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿದ್ದೇವೆ’ ಎಂದು ಸುರೇಶಗೌಡ ಹೇಳಿದರು.