ಬಾಗೇಪಲ್ಲಿ: ತಾಲ್ಲೂಕಿನ ಘಂಟಂವಾರಿಪಲ್ಲಿ ಗ್ರಾಮ ಪಂಚಾಯತಿಗೆ ಸೇರಿದ ಜಾಗದಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ.ಹಾಗೂ ರಾಜಕಾಲುವೆ ಒತ್ತುವರಿಗೆ ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್ಎಸ್ಯುಐ) ಮತ್ತು ಇತರ ಸಂಘಟನೆಗಳ ನೇತೃತ್ವದಲ್ಲಿ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರು ಗ್ರಾ.ಪಂ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಎನ್ಎಸ್ಯುಐ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸೋಮಶೇಖರ್ ಮಾತನಾಡಿ, ಪಂಚಾಯತಿ ಅಧಿಕಾರಿಗಳು, ಜನಪ್ರತಿನಿಧಿಗಳು ಪಂಚಾಯತಿಗೆ ಸೇರಿದ ಆಸ್ತಿಯನ್ನು ಸಂರಕ್ಷಿಸಲು ಪ್ರಯತ್ನಿಸಬೇಕು. ಆಸ್ತಿ ಸಂರಕ್ಷಣೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ತೋರುತ್ತಿರುವ ಕಾರಣದಿಂದಲೇ ಒತ್ತುವರಿ ನಡೆ ತ್ತಿದೆ ಎಂದು ಆರೋಪಿಸಿದರು.
ರಿಯಲ್ಎಸ್ಟೇಟ್ನವರು ಮತ್ತು ಶ್ರೀಮಂತರ ಪ್ರಭಾವದಿಂದ ಗ್ರಾ.ಪಂ. ಅಧಿಕಾರಿಗಳು ಎಲ್ಲೆಂದರಲ್ಲಿ ಕಟ್ಟಡ ಕಟ್ಟಲು ಅವಕಾಶ ನೀಡುತ್ತಿದ್ದಾರೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸಲು ಅವಕಾಶ ಇಲ್ಲದಿದ್ದರೂ ಪರವಾನಗಿ ನೀಡಲಾಗುತ್ತಿದೆ. ಈ ಎಲ್ಲ ಅಂಶವನ್ನು ಗಂಭೀರವಾಗಿ ಪರಿಶೀಲಿಸಿ, ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ಒತ್ತುವರಿ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತಾಲ್ಲೂಕು ಪಂಚಾಯತಿ ಅಧಿಕಾರಿ ಶಿವಪ್ಪ, ಮನವಿಪತ್ರ ಸ್ವೀಕರಿಸಿದರು. ಪರಿಶೀಲನೆ ನಡೆಸಿ, ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಎನ್ಎಸ್ಯುಐ ಸಂಘಟನೆ ಮುಖಂಡರಾದ ಮಂಜುನಾಥ್, ಅಜಯ್, ಅಶ್ವತ್ಥಪ್ಪ, ತಿಪ್ಪಣ್ಣ, ಇರ್ಫಾನ್, ಸೀನಪ್ಪ, ಶ್ರೀನಾಥ್, ನಾಗರಾಜು, ಅಮೀರ್, ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.