ದೇವನಹಳ್ಳಿ: ರಾಜ್ಯ ಸರ್ಕಾರ ಕಳೆದ ತಿಂಗಳಿಂದ ರಾಜ್ಯಾದ್ಯಂತ ಸರ್ಕಾರಿ ಭೂಮಿ ಅಕ್ರಮ ಒತ್ತುವರಿ ತೆರವುಗೊಳಿಸುವಂತೆ ಸ್ಪಷ್ಟ ಸೂಚನೆ ನೀಡಿ–ದ್ದರೂ ಗ್ರಾಮಾಂತರ ಜಿಲ್ಲಾಧಿಕಾರಿ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಪ್ರಜಾವಿಮೋಚನಾ ಚಳುವಳಿ ರಾಜ್ಯಾಧ್ಯಕ್ಷ ಆನೇಕಲ್ ಕೃಷ್ಣಪ್ಪ ಆರೋಪಿಸಿದರು.
ಭೂಮಿ ಬೆಲೆ ಏರುತ್ತಿರುವ ತಾಲ್ಲೂಕಿನಲ್ಲಿ ಬಲಾಡ್ಯರಿಗೆ ಸ್ಥಳಿಯ ಅಧಿಕಾರಿಗಳು ಬೆಂಬಲ ನೀಡಿ ಕೋಟ್ಯಂತರ ಮೌಲ್ಯದ ಸರ್ಕಾರಿ ಸ್ವತ್ತು ಕಬಳಿಕೆಯಾಗುತ್ತಿದೆ. ಈಗಾಗಲೇ ನಗರ ಜಿಲ್ಲೆಯಲ್ಲಿ ₨ 1500 ಕೋಟಿ ಮೌಲ್ಯದ ಒತ್ತುವರಿ ಭೂಮಿ ತೆರವುಗೊಳಿಸಲಾಗಿದೆ, ಆದರೆ ಗ್ರಾಮಾಂತರ ಜಿಲ್ಲಾಧಿಕಾರಿ ಮೌನವಹಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಎ.ಟಿ.ರಾಮಸ್ವಾಮಿ ವರದಿ ಅನ್ವಯ ಒತ್ತುವರಿ ತೆರುವುಗೊಳಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ರಾಜ್ಯಾದ್ಯಂತ ಪ್ರತಿ ಜಿಲ್ಲೆಗೆ ಎರಡು ಉಪವಿಭಾಗ ಕೇಂದ್ರ ಕಾರ್ಯನಿರ್ವಹಿಸುತ್ತಿವೆ, ಆದರೆ ಸರ್ಕಾರ ಇತ್ತೀಚೆಗಷ್ಟೇ ನಗರದಲ್ಲಿದ್ದ ಉಪವಿಭಾಗ ಕೇಂದ್ರ ಕಚೇರಿಯನ್ನು ದೊಡ್ಡಬಳ್ಳಾ ಪುರಕ್ಕೆ ಸ್ಥಳಾಂತರಿಸಿದೆ ಆದರೆ, ಹೊಸ ಕೋಟೆ ತಾಲ್ಲೂಕಿನ ಜನತೆಗೆ ನಗರ ವ್ಯಾಪ್ತಿಗಿಂತ ಎರಡುಪಟ್ಟು ಉಪವಿಭಾಗ ಕೇಂದ್ರ ದೂರದಲ್ಲಿದೆ. ಇದರಿಂದ ರೈತರಿಗೆ, ದಲಿತರಿಗೆ ಅನಾನುಕೂಲವಾಗಿದೆ ಸರ್ಕಾರ ಕೂಡಲೇ ದೇವನಹಳ್ಳಿಗೆ ಉಪವಿಭಾಗ ಕೇಂದ್ರ ಕಚೇರಿ ಆರಂಭಿಸಿ ರೈತರಿಗೆ ನೆರವಾಗಬೇಕು ಎಂದು ಒತ್ತಾಯಿಸಿದರು.
ಪಿ.ವಿ.ಸಿ ಜಿಲ್ಲಾ ಅಧ್ಯಕ್ಷ ದಾಸರಬೀದಿ ಮುರಳಿ ಮಾತನಾಡಿ, ಅಕ್ಟೋಬರ್ 27 ರಂದು ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಪ್ರತಿಭಟನೆ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದೆಂದರು. ಪಿ.ವಿ.ಸಿ ತಾಲ್ಲೂಕು ಅಧ್ಯಕ್ಷ ಬುಳ್ಳಹಳ್ಳಿ ಗೋವಿಂದರಾಜು, ಮಹಿಳಾ ಘಟಕ ಉಪಾಧ್ಯಕ್ಷೆ ನಾಗವೇಣಿ ಮತ್ತು ಶೈಲಜಾ, ಪದ್ಮಶ್ರೀ, ಆಟೋ ಘಟಕ ಅಧ್ಯಕ್ಷ ಮುನಿಯಲ್ಲಪ್ಪ, ಬೆಂಗಳೂರು ನಗರ ಅಧ್ಯಕ್ಷ ಯಡುವನಹಳ್ಳಿ ಕೃಷ್ಣಪ್ಪ ಇದ್ದರು.