ನಮ್ಮೂರಲ್ಲಿ ಗದ್ದೆ ಉಳುಮೆಗೆ ಹೆಚ್ಚಿನವರು ಕೋಣ, ಎತ್ತು ಬಳಸುತ್ತಾರೆ. ಉಳುಮೆ ಮಾಡುವಾಗ ಎತ್ತು, ಕೋಣಗಳಿಗೆ ಬಾರುಕೋಲಿನಿಂದ ಅಷ್ಟಿಷ್ಟು ಹೊಡೆಯುತ್ತಾರೆ. ನಮ್ಮ ಸರ್ಕಾರ ಅದನ್ನೂ ನಿಷೇಧಿಸಿ ಬಿಡಲಿ. ಏಕೆಂದರೆ, ಹಾಗೆ ಬಾರಿಸುವಾಗ ಆ ಮೂಕ ಪ್ರಾಣಿಗಳಿಗೆ ಹಿಂಸೆ ಆಗುತ್ತದೆ! ಕಾರ್ಯಸಾಧುವಲ್ಲದ ಈ ಮನವಿ ಮಂಡಿಸಲು ಒಂದು ಕಾರಣ ಇದೆ. ಕೋಣಗಳಿಗೆ ಹಿಂಸೆಯಾಗುತ್ತದೆ ಎಂಬ ಕಾರಣಕ್ಕೆ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಕ್ರೀಡೆ ಕಂಬಳ ನಿಷೇಧಿಸಿ ಜಿಲ್ಲಾಡಳಿತ ಆದೇಶಿಸಿದೆ. ಜಲ್ಲಿಕಟ್ಟು ಆಚರಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪು ಅನುಸರಿಸಿ, ಕಂಬಳವನ್ನೂ ನಿಷೇಧಿಸಲಾಗಿದೆ.
ಕಂಬಳವನ್ನು ನಿಷೇಧಿಸಿದ ಜಿಲ್ಲಾಡಳಿತ, ಅದನ್ನು ಒಂದು ಪ್ರಾಣಿಹಿಂಸಾ ಕೃತ್ಯ ಎಂದು ಪರಿಗಣಿಸಿರಬೇಕು. ಆದರೆ ಕಂಬಳ ಒಂದು ಕ್ರೀಡೆ ಎಂದು ಅರ್ಥ ಮಾಡಿಕೊಂಡಂತಿಲ್ಲ. ಕಂಬಳ ಆಯೋಜಿಸುವವರು, ಅಲ್ಲಿ ಕೋಣ ಓಡಿಸುವವರು ಆ ಪ್ರಾಣಿಗಳಿಗೆ ಹಿಂಸೆಯಾಗಲಿ ಎಂಬ ಉದ್ದೇಶದಿಂದ ಆ ಕಾರ್ಯ ಮಾಡುತ್ತಿಲ್ಲ. ಕಂಬಳವನ್ನು ಕ್ರೀಡಾಸ್ಫೂರ್ತಿಯಿಂದ ಆಯೋಜಿಸಲಾಗುತ್ತದೆ. ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ಮನುಷ್ಯ ದೈಹಿಕ ವೇದನೆಯನ್ನು ಮೀರಿ, ಓಡುತ್ತಾನಲ್ಲ? ಹಾಗೇ, ಕಂಬಳದ ಕೋಣಗಳನ್ನು ಓಡಿಸಲಾಗುತ್ತದೆ. ಕಂಬಳದ ಕೋಣಗಳು ಮತ್ತು ಅದನ್ನು ಓಡಿಸುವವನ ನಡುವೆ ಒಂದು ಸಾವಯವ ಸಂಬಂಧ ಇದೆ. ಅಲ್ಲಿ ಹಿಂಸೆಯ ಎಸಳೂ ಇಲ್ಲ. ಆಳುವವರು ಇದನ್ನು ಅರ್ಥಮಾಡಿಕೊಳ್ಳಲಿ.