ಯಳಂದೂರು: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ಲಭಿಸಿದಾಗ ಮಾತ್ರ ಸಂವಿಧಾನದ ಆಶಯ ಈಡೇರುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯಲ್ಲಿ ಹಲವು ಯೋಜನೆಗಳಿದ್ದು ಪ್ರತಿಯೊಬ್ಬರೂ ಇದರ ಲಾಭ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕೇತಮ್ಮ ಕರೆ ನೀಡಿದರು.
ಅವರು ಶುಕ್ರವಾರ ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಕೆರೆದಿಂಬ ಪೋಡಿನಲ್ಲಿರುವ ಆರ್ಎಸ್ಟಿ ವಿಶೇಷ ಶಾಲೆಗೆ ತೆರಳಿ ಅಲ್ಲಿನ ವಿದ್ಯಾರ್ಥಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು. ಕಾಡಿನಲ್ಲಿರುವ ಬುಡಕಟ್ಟು ಜನಾಂಗವಾದ ಸೋಲಿಗ ಮಕ್ಕಳು ಕಲಿಕೆಯಲ್ಲಿ ಹಿಂದೆ ಬಿದ್ದಿದ್ದಾರೆ ಎಂದು ತಿಳಿಸಿದರು.
ಸರ್ಕಾರ ಹಾಗೂ ವಿಜಿಕೆಕೆ ವತಿಯಿಂದ ವಿಶೇಷ ಯೋಜನೆ ಅಡಿಯಲ್ಲಿ ಕೆರೆದಿಂಬ ಪೋಡಿನಲ್ಲಿ ಆರ್ಎಸ್ಟಿ ಶಾಲೆ ನಡೆಯುತ್ತಿದೆ ಎಂದರು. ಇಲ್ಲಿ 4ನೇ ತರಗತಿ ವರೆಗೆ ಕಲಿಯಲು ಅವಕಾಶವಿದೆ. ಈ ಹಂತದಲ್ಲಿ ಇವರಿಗೆ ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಸರ್ಕಾರಿ ಸೌಲಭ್ಯಗಳು ಲಭಿಸುತ್ತಿದೆ. ಸೋಲಿಗ ಜನಾಂಗದವರೂ ಇನ್ನೂ ಕೆಲವೆಡೆ ಶಿಕ್ಷಣದಿಂದ ವಂಚಿತರಾಗಿದ್ದು ಇಂತಹ ಸೌಲಭ್ಯಗಳನ್ನು ಪಡೆದುಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ ಶಾಲೆಯ ವಿದ್ಯಾರ್ಥಿಗಳ ಕಲಿಕಾ ಪ್ರಗತಿಯ ಬಗ್ಗೆ ಮಾಹಿತಿ ಪಡೆದರು. ನಂತರ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ದಾನಿಗಳಾದ ಸಂತೆಮರಹಳ್ಳಿ ವೆಂಟಕರಾಮು ಅವರು ನೀಡಿದ ತಟ್ಟೆ, ಲೋಟಗಳು, ಪುಸ್ತಕ, ಬಾಚಣಿಗೆ, ಪೌಡರ್ ಡಬ್ಬ ಸೇರಿ ವಿವಿಧ ಕಲಿಕಾ ಸಾಮಾಗ್ರಿಗಳನ್ನು ವಿತರಿಸಲಾಯಿತು. ಪೋಡಿಯ ನಾಗರಿಕರು, ಸೋಲಿಗ ಮುಖಂಡರಾದ ಬೊಮ್ಮಯ್ಯ, ರಂಗೇಗೌಡ, ವಿಜಿಕೆಕೆ ಶಿಕ್ಷಕ ನಾಗೇಶ್ ಇದ್ದರು.