ಶಿವಮೊಗ್ಗ ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕೋಟ್ಯಂತರ ಹಣ ದುರುಪಯೋಗವಾಗಿದೆ ಎಂಬ (ಪ್ರ.ವಾ., ಮೇ 23) ಸುದ್ದಿ ಓದಿ ಅಚ್ಚರಿಯಾಯಿತು ಜೊತೆಗೆ ಕೋಪವೂ ಬಂದಿತು.
ಬಡವರು ಉದ್ಯೋಗ ಅರಸಿ ಗುಳೆ ಹೋಗದಂತೆ ತಡೆಯಲು ಸರ್ಕಾರ ತಂದ ಯೋಜನೆಯನ್ನು ಕೆಲವು ಅವಕಾಶವಾದಿಗಳು ದುರುಪಯೋಗ ಮಾಡಿಕೊಂಡಿರುವುದು ಕ್ಷಮಾರ್ಹವಲ್ಲ. ಇದನ್ನೆಲ್ಲ ನೋಡಿಕೊಳ್ಳಲು ಜಿಲ್ಲಾ ಪಂಚಾಯಿತಿಯಲ್ಲಿ ಕೇಂದ್ರ ಸರ್ಕಾರದ ಓಂಬುಡ್ಸ್ಮನ್ ಅಧಿಕಾರಿ ಹಾಗೂ ಸಿಬ್ಬಂದಿ ಇದ್ದರೂ ಹೀಗೆ ಆಗಿರುವುದನ್ನು ನೋಡಿದರೆ, ಅವರು ಸಹ ಇದಕ್ಕೆ ಸಹಕರಿಸಿದ್ದಾರೆ ಎಂದೇ ತಿಳಿಯಬೇಕಾಗುತ್ತದೆ.
ಇಡೀ ಜಿಲ್ಲೆಯಲ್ಲಿ ಈ ಯೋಜನೆಗೆ ಎಷ್ಟು ಹಣ ಬಿಡುಗಡೆಯಾಗಿದೆ, ಅದರಲ್ಲಿ ಎಷ್ಟು ದುರುಪಯೋಗವಾಗಿದೆ, ಇದಕ್ಕೆಲ್ಲ ಯಾರು ಹೊಣೆ ಎಂಬುದನ್ನು ಸರ್ಕಾರ ತಕ್ಷಣ ಪತ್ತೆ ಮಾಡಿ ತಪ್ಪಿಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಸರ್ಕಾರಕ್ಕೆ ನಷ್ಟವಾದ ಮೊತ್ತವನ್ನು ಬಡ್ಡಿ ಸಮೇತ ವಸೂಲು ಮಾಡಬೇಕು. ಆಗ ಭವಿಷ್ಯದಲ್ಲಿ ಇಂತಹ ದುರುಪಯೋಗಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ.