ಬೆಂಗಳೂರು ನಗರ ವ್ಯಾಪ್ತಿಯ ಲೋಕಸಭಾ ಕ್ಷೇತ್ರಗಳ ವಿದ್ಯಾವಂತರು, ಐ.ಟಿ ಕಂಪೆನಿ ಉದ್ಯೋಗಿಗಳು ಮತದಾನದ ದಿನ ಮೋಜು ಮಸ್ತಿಗೆ ತೆರಳಿದ್ದ ಕಾರಣ ಮತದಾನದ ಪ್ರಮಾಣ ಕಡಿಮೆ ಆಗಿದೆ ಎಂದು ಕೆಲವರು ವಿಶ್ಲೇಷಿಸುತ್ತಿದ್ದಾರೆ. ಕೆಲವು ಮಾಧ್ಯಮಗಳಲ್ಲಿ ಈ ಧಾಟಿಯ ವರದಿಗಳೂ ಬಂದಿವೆ. ಆದರೆ ಬಡವರು, ಅನಕ್ಷರಸ್ಥರೆಲ್ಲರೂ ಮತ ಚಲಾಯಿಸಿದ್ದಾರೆ ಮತ್ತು ವಿದ್ಯಾವಂತರಲ್ಲಿ ಬಹುಪಾಲು ಮಂದಿ ಮತದಾನದಿಂದ ದೂರ ಉಳಿದಿದ್ದಾರೆ ಎಂಬ ಮಾತಿಗೆ ಆಧಾರ ಏನಿದೆ?
ಬೆಂಗಳೂರು ಲೋಕಸಭಾ ಕ್ಷೇತ್ರಗಳಲ್ಲಿ ಶೇಕಡ 52ರಿಂದ 55ರಷ್ಟು ಮತದಾನ ಆಗಿದೆ. ಇಲ್ಲಿನ ವಿದ್ಯಾವಂತರಲ್ಲಿ ಇಂತಿಷ್ಟು ಜನ ಮತ ಚಲಾಯಿಸಿದ್ದಾರೆ, ಅನಕ್ಷರಸ್ಥರು ಇಂತಿಷ್ಟು ಜನ ಮತ ಚಲಾಯಿಸಿದ್ದಾರೆ ಎಂದು ಖಚಿತವಾಗಿ ಹೇಳಲು ಯಾವುದೇ ಆಧಾರ ಇದುವರೆಗೂ ಲಭ್ಯವಾಗಿಲ್ಲ.
ನಗರದ ಮತದಾರರ ಪಟ್ಟಿಯಲ್ಲೇ ದೋಷ ಇದೆ ಎಂಬ ಮಾತುಗಳನ್ನು ನಿವೃತ್ತ ಕಮಾಂಡರ್ ಪಿ.ಜಿ. ಭಟ್, ಸಾಮಾಜಿಕ ಕಾರ್ಯಕರ್ತ ಡಾ. ಅಶ್ವಿನ್ ಮಹೇಶ್ ಆಡಿದ್ದಾರೆ. ಮತದಾರರ ಪಟ್ಟಿಯಲ್ಲಿ ಹೆಸರುಗಳ ಪುನರಾವರ್ತನೆ, ಮೃತಪಟ್ಟವರ ಹೆಸರು ಇನ್ನೂ ಉಳಿದುಕೊಂಡಿರುವುದು, ಕ್ಷೇತ್ರದಲ್ಲಿ ಇಲ್ಲದವರ ಹೆಸರು ಇರುವುದು ಸಾಕಷ್ಟಿದೆ ಎಂಬ ಆರೋಪಗಳು ಇವೆ. ಈ ಸಂಬಂಧ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ಸಲ್ಲಿಕೆಯಾಗಿತ್ತು.
ಮತದಾರರ ಪಟ್ಟಿಯಲ್ಲಿರುವ ದೋಷಗಳನ್ನು ನಿವಾರಿಸಬೇಕು. ನಂತರವೂ ಮತದಾನದ ಪ್ರಮಾಣ ಕಡಿಮೆ ಎಂದು ಕಂಡುಬಂದರೆ ವಿದ್ಯಾವಂತರು ನಿಜಕ್ಕೂ ಮತದಾನದಿಂದ ದೂರ ಉಳಿದಿದ್ದರೇ ಎಂಬುದನ್ನು ನಿಖರವಾಗಿ ಗುರುತಿಸಬೇಕು. ವೃಥಾ ಆರೋಪ ಸಲ್ಲದು.