ನವದೆಹಲಿ( ಐಎಎನ್ಎಸ್): ಯುವಜನರಿಗೆ ಕಡ್ಡಾಯ ಸೈನಿಕ ತರಬೇತಿ ನೀಡುವ ಪ್ರಸ್ತಾವ ಸರ್ಕಾರದ ಪರಿಶೀಲನೆಯಲ್ಲಿ ಇಲ್ಲ. ಇದರಿಂದ ಇಡೀ ದೇಶವನ್ನೇ ಮಿಲಿಟರಿಕರಣಗೊಳಿಸಿದಂತೆ ಆಗುತ್ತದೆ. ಈ ಉದ್ದೇಶ ಸರ್ಕಾರ ಹೊಂದಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ಅರುಣ್ ಜೇಟ್ಲಿ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
ಲೋಕಸಭೆಗೆ ಈ ಕುರಿತು ಲಿಖಿತ ಉತ್ತರ ನೀಡಿರುವ ಜೇಟ್ಲಿ, ಕೆಲವು ನಿರುದ್ಯೋಗಿ ಯುವಕರು ಸೈನಿಕ ತರಬೇತಿ ಪಡೆದು ಸೇನೆಗೆ ಸೇರಬಹುದು. ಹಾಗಂತ, ಎಲ್ಲರಿಗೂ ಕಡ್ಡಾಯ ಸೈನಿಕ ತರಬೇತಿ ಜಾರಿಗೊಳಿಸಿದರೆ ಇಡೀ ದೇಶವನ್ನೇ ಮಿಲಿಟರಿಕರಣಗೊಳಿಸಿದಂತೆ ಆಗುತ್ತದೆ. ಇದು ದೇಶದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಪ್ರಜಾಪ್ರಭುತ್ವ ಗಣತಂತ್ರ ವ್ಯವಸ್ಥೆ ಹೊಂದಿರುವ ಭಾರತದಲ್ಲಿ ಕಡ್ಡಾಯ ಸೈನಿಕ ತರಬೇತಿಗೆ ಸಂವಿಧಾನದಲ್ಲಿ ಕೂಡ ಅವಕಾಶ ಇಲ್ಲ ಎಂದಿದ್ದಾರೆ.
ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ಮುಕ್ತವಾಗಿ ತಮ್ಮ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ. ಕಡ್ಡಾಯ ಸೈನಿಕ ತರಬೇತಿ ಪ್ರಜಾಪ್ರಭುತ್ವ ವ್ಯವಸ್ಥೆ ವಿರೋಧಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.