ಜಮ್ಮು/ನವದೆಹಲಿ (ಪಿಟಿಐ): ಕಾಶ್ಮೀರ ಕಣಿವೆಯಲ್ಲೀಗ ಪ್ರವಾಹ ಭೀತಿ ಮರೆಯಾಗಿ ಸಾಂಕ್ರಾಮಿಕ ರೋಗ ಹರಡುವ ಆತಂಕ ಆವರಿಸಿದೆ. ಅದರ ಬೆನ್ನಲ್ಲೇ ಸಂತ್ರಸ್ತರಿಗೆ ಶುದ್ಧ ಕುಡಿಯುವ ನೀರು ಮತ್ತು ಔಷಧಗಳನ್ನು ಪೂರೈಸುವ ದೊಡ್ಡ ಸವಾಲು ಎದುರಾಗಿದೆ.
ಕುಡಿಯುವ ನೀರು ಸರಬರಾಜು ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈ ನಡುವೆ ರೈಲ್ವೆ ಹಾಗೂ ಪರಿಹಾರ ಕಾರ್ಯಾಚರಣೆ ಪಡೆಗಳು ಪೂರೈಸುತ್ತಿರುವ ನೀರಿನ ಬಾಟಲ್ ಯಾತಕ್ಕೂ ಸಾಕಾಗುತ್ತಿಲ್ಲ.
ಇದರಿಂದಾಗಿ ದಿನಕ್ಕೆ ಒಂದು ಲಕ್ಷ ಲೀಟರ್ ನೀರನ್ನು ಶುದ್ಧೀಕರಿಸುವ ಸಾಮರ್ಥ್ಯದ 20 ಘಟಕ, 13 ಟನ್ ಕ್ಲೋರಿನ್ ಮಾತ್ರೆಗಳನ್ನು ಶ್ರೀನಗರಕ್ಕೆ ತರಿಸಿಕೊಳ್ಳಲಾಗಿದೆ. ಕಡಿದು ಹೋಗಿರುವ ಸ್ಥಿರ ದೂರವಾಣಿ ಸಂಪರ್ಕ ಮರು ಸ್ಥಾಪನೆ ಯತ್ನ ಮುಂದುವರಿದಿದ್ದು ಪರ್ಯಾಯ ವ್ಯವಸ್ಥೆಯಾಗಿ ಬಿಎಸ್ಎನ್ಎಲ್ ಹೆಚ್ಚುವರಿ ಯಂತ್ರೋಪಕರಣಗಳನ್ನು ಅಳವಡಿಸಲು ಮುಂದಾಗಿದೆ.
ಪ್ರವಾಹದಲ್ಲಿ ರೈಲು ಮಾರ್ಗ ಕೊಚ್ಚಿ ಹೋದ ಕಾರಣ 11 ದಿನಗಳಿಂದ ಸ್ಥಗಿತಗೊಂಡಿದ್ದ ರೈಲು ಸಂಚಾರ ಸೋಮವಾರದಿಂದ ಪುನರಾರಂಭವಾಗಿದೆ.
ಶ್ರೀನಗರ–ಬಾರಾಮುಲ್ಲಾ ನಡುವೆ ಮೊದಲ ರೈಲು ಸಂಚಾರ ಆರಂಭವಾಗಿದ್ದು, ಉಳಿದ ಭಾಗಗಳಲ್ಲೂ ಶೀಘ್ರ ಸಂಚಾರ ಆರಂಭವಾಗುವ ಸಾಧ್ಯತೆ ಇದೆ.
ಕೆಲವು ರಸ್ತೆಗಳ ದುರಸ್ತಿ ಕೈಗೊಳ್ಳಲಾಗಿದ್ದು ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ ನಡುವೆ ರಕ್ಷಣಾ ಕಾರ್ಯಾಚರಣೆ 14ನೇ ದಿನಕ್ಕೆ ಕಾಲಿಟ್ಟಿದ್ದು, ಇಲ್ಲಿಯವರೆಗೆ ಸೇನೆ 2.26 ಲಕ್ಷಕ್ಕೂ ಹೆಚ್ಚು ನಾಗರಿಕರನ್ನು ರಕ್ಷಿಸಿದೆ.
ಕಾರ್ಯಾಚರಣೆ: ‘ಸುಪ್ರೀಂ’ ಅಸಮಾಧಾನ |
---|
ನವದೆಹಲಿ(ಪಿಟಿಐ): ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವಾಗ ಕೇವಲ ಶ್ರೀನಗರದ ಮೇಲಷ್ಟೇ ಗಮನ ಕೇಂದ್ರೀಕರಿಸಬಾರದು ಎಂದು ಕೇಂದ್ರ ಸರ್ಕಾರ ಹಾಗೂ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ. |
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.