ಶ್ರೀನಗರ (ಪಿಟಿಐ): ಪ್ರವಾಹ ಪೀಡಿತ ಜಮ್ಮು ಮತ್ತು ಕಾಶ್ಮೀರ ಕಣಿವೆಯಲ್ಲಿ ವಾರದಿಂದ ಬಿಡುವು ಕೊಟ್ಟಿದ್ದ ಮಳೆ ಭಾನುವಾರ ಬೆಳಿಗ್ಗೆಯಿಂದ ಮತ್ತೆ ಸುರಿಯಲು ಆರಂಭಿಸಿದ್ದು ಹೊಸ ಪ್ರವಾಹ ಭೀತಿ ಸೃಷ್ಟಿಸಿದೆ. ಮಳೆ ಮುಂದುವರಿದರೆ ಪರಿಹಾರ ಕಾರ್ಯಾಚರಣೆಗೂ ತೀವ್ರ ಅಡಚಣೆಯಾಗುವ ಸಾಧ್ಯತೆಗಳಿವೆ.
ವಾರದಿಂದ ಪ್ರಖರವಾಗಿದ್ದ ಸೂರ್ಯ ಮರೆಯಾಗಿ ದಟ್ಟವಾದ ಮೋಡಗಳು ಆವರಿಸಿವೆ. ಮಳೆ ಆರಂಭವಾದ ಕಾರಣ ವಿಮಾನ ಹಾಗೂ ಹೆಲಿಕಾಪ್ಟರ್ ಹಾರಾಟವನ್ನು ಸೇನೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಭಾನುವಾರ ಅಪರಾಹ್ನದ ನಂತರ ವಾತಾವರಣ ತಿಳಿಯಾದ ಮೇಲೆ ಪುನಃ ಹಾರಾಟ ಆರಂಭಿಸಿತು.
ಮುಂದುವರಿದ ಅಸಹಕಾರ: ಸ್ಥಳೀಯರ ಅಸಹಕಾರ ಹಾಗೂ ಪ್ರತಿಕೂಲ ಹವಾಮಾನದ ಮಧ್ಯೆಯೂ ರಕ್ಷಣಾ ಕಾರ್ಯಾಚರಣೆ 13ನೇ ದಿನಕ್ಕೆ ಕಾಲಿಟ್ಟಿದೆ.
ಸೇನೆ ಹಾಗೂ ಪ್ರಕೃತಿ ವಿಕೋಪ ನಿರ್ವಹಣಾ ಪಡೆ (ಎನ್ಡಿಆರ್ಎಫ್) ಶನಿವಾರ ರಾತ್ರಿಯವರೆಗೆ ಪ್ರವಾಹದ ಮಧ್ಯೆ ಸಿಲುಕಿದ್ದ 60 ಸಾವಿರಕ್ಕೂ ಹೆಚ್ಚು ಜನರನ್ನು ರಕ್ಷಿಸಿವೆ. ರಾಜ್ಯದಲ್ಲಿ ಇನ್ನೂ ಒಂದು ಲಕ್ಷಕ್ಕೂ ಹೆಚ್ಚು ಜನರು ಜಲಾವೃತ ಪ್ರದೇಶಗಳಲ್ಲಿ ಸಿಲುಕಿದ್ದಾರೆ ಎಂದು ಅಂದಾಜಿಸಲಾಗಿದೆ.
ರಾಜ್ಯದಲ್ಲಿ 160 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅಧಿಕೃತವಾಗಿ ಅಂಕಿ, ಅಂಶಗಳನ್ನು ಪ್ರಕಟಿಸಿದ್ದಾರೆ. ಆದರೆ, ಅನಧಿಕೃತ ಮೂಲಗಳ ಪ್ರಕಾರ 250 ನಾಗರಿಕರು ಪ್ರವಾಹಕ್ಕೆ ಬಲಿಯಾಗಿದ್ದಾರೆ.
ಜನರನ್ನು ಬೆಸೆದ ದುರಂತ ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಜನರ ಸಂಬಂಧ ಬೆಸೆಯಲೂ ಕಾರಣವಾಗಿದೆ. ನಿರಾಶ್ರಿತರಾಗಿರುವ ಅನೇಕ ಮುಸ್ಲಿಂ ಹಾಗೂ ಹಿಂದೂ ಕುಟುಂಬಗಳು ಗುರುದ್ವಾರಗಳಲ್ಲಿ ಆಶ್ರಯ ಪಡೆದಿವೆ. ಅದೇ ರೀತಿ ಅನೇಕ ಹಿಂದೂ ಮತ್ತು ಸಿಖ್ ಕುಟುಂಬಗಳಿಗೆ ಮಸೀದಿಗಳು ಅನ್ನ, ಆಶ್ರಯ ನೀಡಿವೆ. |
ಈ ನಡುವೆ ತರಕಾರಿ ಬೆಲೆ ಗಗನಕ್ಕೇರಿದ್ದು, ಮಾಂಸ ತೀರಾ ಅಗ್ಗವಾಗಿದೆ. ಕಡಿದು ಹೋಗಿದ್ದ ರಸ್ತೆ ಸಂಪರ್ಕವನ್ನು ಭಾಗಶಃ ಮರು ಸ್ಥಾಪಿಸಲಾಗಿದೆ. ಶೇ 60ರಷ್ಟು ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇನ್ನೂ 15 ದಿನಗಳ ಒಳಗಾಗಿ ವಿದ್ಯುತ್ ಸಂಪರ್ಕ ಯಥಾಸ್ಥಿತಿಗೆ ಮರಳುವ ಸಾಧ್ಯತೆ ಇದೆ.
ನರಕವಾದ ಸುಂದರ ಕಣಿವೆ: ಭೂಮಿಯ ಮೇಲಿನ ಸ್ವರ್ಗ ಎಂದು ಕರೆಯಲಾಗುತ್ತಿದ್ದ ಕಾಶ್ಮೀರ ಕಣಿವೆಯ ಚಿತ್ರಣ ಪ್ರವಾಹದ ನಂತರ ಸಂಪೂರ್ಣ ಬದಲಾಗಿದೆ. ಎರಡು ವಾರಗಳಿಂದ ಸ್ಥಳೀಯ ಪೌರಾಡಳಿತ ಸಂಸ್ಥೆಗಳು ನಿಷ್ಕ್ರಿಯವಾದ ಕಾರಣ ರಸ್ತೆ, ಬಡಾವಣೆಗಳಲ್ಲಿ ಸಂಗ್ರಹವಾಗಿರುವ ತ್ಯಾಜ್ಯ ಕೊಳೆತು ನಾರುತ್ತಿದೆ. ಎಲ್ಲೆಡೆ ಗಬ್ಬು ವಾಸನೆ ಹರಡಿದ್ದು. ಕೊಳೆತ ಪ್ರಾಣಿ, ಪಕ್ಷಿ ಹಾಗೂ ಜಾನುವಾರುಗಳ ಶವಗಳು ಕಾಣುತ್ತಿವೆ. ರೋಗ ಹರಡುವ ಭೀತಿ ಎದುರಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.