‘ಕಲಿಕೆಯ ಮಾಧ್ಯಮ ಯಾವುದೇ ಇರಲಿ. ಮಾತನಾಡುವ, ಚಿಂತಿಸುವ ಭಾಷೆಯಾಗಿಯಾದರೂ ಕನ್ನಡವನ್ನು ಉಳಿಸಬೇಕಾಗಿದೆ’ ಎಂದಿದ್ದಾರೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ (ಪ್ರ.ವಾ., ಏ. 20). ಇಂಥ ಅವೈಜ್ಞಾನಿಕ ನಿಲುವು ಹಾಗೂ ಉದಾರ ಮನೋಭಾವದಿಂದಾಗಿಯೇ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಕುತ್ತು ಒದಗಿರುವುದು.
ಕಲಿಕಾ ಮಾಧ್ಯಮ ಮಗುವಿನ ಮಾತೃಭಾಷೆಯಾದಾಗ ಮಾತ್ರ ಕಲಿಯುವ ವಿಷಯಗಳು ಮಗುವಿಗೆ ಸುಲಭವಾಗಿ ಗ್ರಹಿಕೆಗೆ ನಿಲುಕಿ, ಶೈಕ್ಷಣಿಕ ಪ್ರಗತಿ ಸಾಧ್ಯ ಎಂಬುದು ಕಾಲ, ದೇಶವನ್ನು ಮೀರಿದ ಸತ್ಯವಾಗಿ ಗೋಚರಿಸುತ್ತಲೇ ಇದೆ. ಆದರೆ ಕ.ಸಾ.ಪ. ಅಧ್ಯಕ್ಷರಿಗೇ ಇದು ಗೋಚರಿಸದಿರುವುದು ದುರದೃಷ್ಟಕರ.
ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ವಿಷಯದಲ್ಲಿ ಸದಾ ಎಚ್ಚರದಿಂದಲೇ ಇರಬೇಕು. ಭಾಷಾ ಮಾಧ್ಯಮದ ವಿಷಯದಲ್ಲಿ ರಾಜಿ ರಹಿತವಾಗಿ ಹೋರಾಡಬೇಕು. ಅದು ಬಿಟ್ಟು ಇಂಥ ಉದಾರ ನೀತಿ ಸಲ್ಲದು. ಕ.ಸಾ.ಪ. ಅಧ್ಯಕ್ಷರು ಇನ್ನಾದರೂ ಕಣ್ತೆರೆಯಲಿ.
ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ ಹಗರಿಬೊಮ್ಮನಹಳ್ಳಿ ತಾಲ್ಲೂಕು