ಮುಂಬೈ (ಪಿಟಿಐ): ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಕಥಕ್ ‘ನೃತ್ಯ ಸಾಮ್ರಾಜ್ಞಿ’ ಸಿತಾರಾ ದೇವಿ (94) ಮಂಗಳವಾರ ನಿಧನರಾದರು.
1929ರಲ್ಲಿ ಕೋಲ್ಕತ್ತದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಸಿತಾರಾ ದೇವಿ ಅವರು ತಂದೆ, ಕಥಕ್ ನೃತ್ಯಪಟು ಸುಖದೇವ್ ಮಹಾರಾಜ್ ಸಂಗ್ರಹಿಸಿದ ಸಂಗೀತ ಮತ್ತು ನೃತ್ಯ ಸಾಹಿತ್ಯದಿಂದ ಆಕರ್ಷಿತರಾಗಿದ್ದರು.
ತಂದೆ ಸುಖರಾಮ್ ಕಥಕ್ ತರಬೇತಿಗಾಗಿ ಮಗಳನ್ನು ಸಹೋದರಿಯ ಬಳಿ ಕಳುಹಿಸಿದ್ದರು. ಸಿತಾರಾ ಅವರಿಗೆ 11 ವರ್ಷವಾದಾಗ ಸುಖದೇವ್ ಕುಟುಂಬ ಮುಂಬೈಗೆ ಸ್ಥಳಾಂತರಗೊಂಡಿತು.
ಮುಂಬೈನಲ್ಲಿ ನಡೆದ ಕಾರ್ಯ-ಕ್ರಮವೊಂದರಲ್ಲಿ ಸಿತಾರಾ ನೀಡಿದ ಪ್ರದರ್ಶನ ನೋಡಿ ನೊಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ್ ಟ್ಯಾಗೋರ್ ಅವರು ಸಿತಾರಾ ಅವರಿಗೆ ‘ನೃತ್ಯ ಸಾಮ್ರಾಜ್ಞಿ’ ಎಂಬ ಬಿರುದು ನೀಡಿದರು.
‘ಮೊಘಲ್–ಎ–ಆಜಂ’ ಚಲನಚಿತ್ರ ನಿರ್ದೇಶಕ ಕೆ. ಆಸೀಫ್ ಅವರನ್ನು ಸಿತಾರಾ ಮದುವೆಯಾಗಿದ್ದರು. ನಂತರ ಪ್ರತಾಪ್ ಬರೂಟ್ ಅವರನ್ನು ವಿವಾಹವಾದರು.
ಕಥಕ್ ನೃತ್ಯವನ್ನು ಬಾಲಿವುಡ್ ಸಿನಿಮಾಗೆ ಪರಿಚಯಿಸಿದ ಕೀರ್ತಿ ಸಿತಾರಾ ದೇವಿ ಅವರಿಗೆ ಸಲ್ಲುತ್ತದೆ. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಅಂತ್ಯಕ್ರಿಯೆ ಗುರುವಾರ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.